ಸತ್ಯ ಬೂದಿ ಮುಚ್ಚಿದ ಕೆಂಡದಂತೆ
ಸತ್ಯ ಬೂದಿ ಮುಚ್ಚಿದ ಕೆಂಡದಂತೆ
ಸತ್ಯ ಎಂಬುದು ಬೂದಿ ಮುಚ್ಚಿದ ಕೆಂಡದಂತೆ ಎಂದು ಹೇಳುತ್ತಾರೆ. ಅದು ನಿಜವೂ ಹೌದು. ಬಚ್ಚಿಟ್ಟಷ್ಟು ಹೆಚ್ಚು ಸುಡುತ್ತ ಬರುತ್ತದೆ.
ಸೌದಾಮಿನಿ ಎನ್ನುವ ಹೆಂಗಸೊಬ್ಬಳು ನಾಲ್ಕಾರು ಜನ ಮಹಿಳೆಯರನ್ನು ಕರೆದುಕೊಂಡು ಸಮಾಜ ಸೇವೆ ಎನ್ನುವ ಧ್ಯೇಯದಡಿ ಕೆಲಸ ಮಾಡುತ್ತಿದ್ದಳು. ಹೆಣ್ಣು ಮಕ್ಕಳ ಪರವಾಗಿ ಎನ್ನುವ ಧ್ವನಿ ಮಾತ್ರ ತುಂಬಾ ಜೋರಿತ್ತು. ಅದೇ ಪ್ರಕಾರ ಕೆಲಸವನ್ನು ಮಾಡುತ್ತಿದ್ದವಳಂತೆ ತೋರಿಸಿ ಕೊಳ್ಳುತ್ತಿದ್ದಳು. ಎಷ್ಟೋ ಜನ ಅನಾಥ ಹೆಣ್ಣು ಮಕ್ಕಳು ಆಕೆಯ ಬಳಿ ರಕ್ಷಣೆ ಕೇಳಿ ಬಂದು , ಎಷ್ಟೋ ಜನ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಯಲ್ಲಿ ಶೋಷಣೆಗೊಳಗಾದವರು ಸಹ ಬಂದು ಆಕೆಯ ಬಳಿ ರಕ್ಷಣೆ ಕೇಳಿ ಬಂದು ಸಹಾಯ ಪಡೆದಿದ್ದಾರೆ. ಒಳ್ಳೆಯ ಹೆಸರು ಕೂಡ ಮಾಡಿದ್ದಳು ಈ ಸೌದಾಮಿನಿ. ದೊಡ್ಡ ಮುಖದ , ಬಿಳಿ ಬಣ್ಣದ , ಉದ್ದ ಜಡೆಯ ಸುಂದರಿಯಾಗಿದ್ದಳು. ಮನೆಯ ಕಡೆಯೂ ಅನುಕೂಲಸ್ಥೆ ತರ ಕಾಣುತ್ತಿದ್ದಳು. ಯಾವಾಗಲೂ ಒಂದು ಮೂರ್ನಾಲ್ಕು ಜನ ದಾಂಡಿಗರು ಆಕೆಯ ಸುತ್ತ ಇರುತ್ತಿದ್ದರು. ಸಾಮಾಜಿಕ ಸ್ಥಳಗಳಲ್ಲಿ , ಸಾಮಾಜಿಕ ಕಾರ್ಯಕ್ರಮಗಳಲ್ಲಿ ಎಲ್ಲಿ ಹೋದರೂ ಸೌದಾಮಿನಿ ಒಂದು ಗತ್ತಲ್ಲಿ ಇರುತ್ತಿದ್ದಳು. ಜೊತೆಗೆ ಆ ದಾಂಡಿಗರು ಕೂಡ. ಜೊತೆಗೆ ಆಕೆ ಇರುತ್ತಿದ್ದ ಮನೆಯಲ್ಲಿ ಯಾವಾಗಲೂ ಹೆಣ್ಣು ಮಕ್ಕಳು ಅದರಲ್ಲೂ ಪ್ರಾಯದ ಹೆಣ್ಣು ಮಕ್ಕಳು ಹೆಚ್ಚಾಗಿ ಇರುತ್ತಿದ್ದರು. ಯಾರಾದರೂ ಪ್ರಶ್ನೆ ಮಾಡಿದರೆ ರಕ್ಷಣೆ ಕೇಳಿ ಬಂದವರು , ಸಹಾಯ ಕೇಳಿಕೊಂಡು ಬಂದವರು ಎಂದು ಉತ್ತರ ಕೊಡುತ್ತಿದ್ದರು. ಆಕೆಯ ಮನೆಗೆ ದೊಡ್ಡ ದೊಡ್ಡ ಜನರು ಆಗಾಗ ಹೋಗಿ ಬಂದು ಮಾಡುತ್ತಿದ್ದರು. ಮಿನಿಸ್ಟರ್ಸ್ , ಆಫೀಸರ್ಸ್ , ಬೇರೆ ಬೇರೆ ಕಡೆಯ ದೊಡ್ಡ ದೊಡ್ಡ ಉದ್ಯಮಿಗಳು ಸಹ ಬಂದು ಹೋಗುತ್ತಿದ್ದರು. ಒಮ್ಮೊಮ್ಮೆ ಅವರ ಕಾರುಗಳಲ್ಲಿ ಅಲ್ಲಿದ್ದ ಪ್ರಾಯದ ಹೆಣ್ಣು ಮಕ್ಕಳು ಸಹ ಹೋಗುತ್ತಿದ್ದರು. ಯಾರಾದರೂ ಕೇಳಿದರೆ ಮನೆಕೆಲಸಕ್ಕೆ ಎಂಬ ಉತ್ತರ ಸಿದ್ಧ ಇರುತ್ತಿತ್ತು.
ಹೀಗೆ ಇರುತ್ತಿದ್ದ ಆಕೆಯ ಮೇಲೆ ಸ್ವಲ್ಪ ದಿನಗಳ ನಂತರ ಒಂದು ಅಪವಾದವೊಂದು ಹುಡುಕಿಕೊಂಡು ಬಂದಿತು. ಹೆಣ್ಣಿನ ಹೆಸರಲ್ಲಿ ಸಂಘಟನೆ ಮಾಡುವ ಈಕೆ ಹೆಣ್ಣನ್ನು ಮಾರಾಟ ಮಾಡುವ ಕಸುಬು ಮಾಡುತ್ತಿದ್ದಾಳೆ ಎಂದು. ಶೋಷಣೆಯ ವಿರುದ್ಧ ನನ್ನ ಧ್ವನಿ ಎಂದವಳು ಹೆಣ್ಣನ್ನೇ ಮಾರುತ್ತಿದ್ದಾಳೆ ಎಂದು ಒಂದು ಪತ್ರಿಕೆಯಲ್ಲಿ ಬಂದರೆ , ಹೆಣ್ಣನ್ನು ತಲೆ ಹಿಡಿದು ಬದುಕುತ್ತಿದ್ದಾಳೆ ಎಂದು ಮತ್ತೊಂದು ದಿನಪತ್ರಿಕೆಯಲ್ಲಿ , ಒಳಗೊಂದು ಹೊರಗೊಂದು ವೇಷ ತೊಟ್ಟ ಸೌದಾಮಿನಿ ಎಂದು ಮತ್ತೊಂದು ನ್ಯೂಸ್ ಚಾನೆಲ್ ಒಂದರಲ್ಲಿ. ಹೀಗೆ ವಿವಿಧ ಮಾದ್ಯಮಗಳಲ್ಲಿ ವಿವಿಧ ಬಗೆಯಲ್ಲಿ ಆರೋಪ ಪ್ರತ್ಯಾರೋಪಗಳು ಕೇಳಿ ಬರತೊಡಗಿದವು.
ಆಗ ಎಷ್ಟೋ ಜನರು ಆಕೆಯ ಪರ ನಿಂತರೆ , ಕೆಲವೊಂದಿಷ್ಟು ಬಡ ಕುಟುಂಬಗಳು ಆಕೆಯ ವಿರುದ್ಧ ಪ್ರತಿಭಟನೆಗೆ ನಿಂತವು. ಆ ಬದ ಜನರ ಹೇಳಿಕೆಯ ಪ್ರಕಾರ ತನಿಖೆ ಆರಂಭಿಸಿದಾಗ ಆಕೆ ಆ ಬಡ ಕುಟುಂಬದ ಹೆಣ್ಣು ಮಕ್ಕಳನ್ನು ಕೆಲಸ ಕೊಡಿಸುವ ನೆಪದಲ್ಲಿ ಎಲ್ಲಿಗೋ ಸಾಗಿ ಹಾಕಿರುವ ಸತ್ಯ ಬೆಳಕಿಗೆ ಬಂದಿತ್ತು. ಆಗ ಪೋಲಿಸಿನವರ ಬಿರುಸಿನ ಕಾರ್ಯಾಚರಣೆಯಿಂದ ಸೌದಾಮಿನಿ ಸೆರೆಯಿಂದ ಎಷ್ಟೋ ಜನ ಬಡ ಹೆಣ್ಣು ಮಕ್ಕಳ ರಕ್ಷಣೆ ಆಗಿ ತಮ್ಮ ತಮ್ಮ ಕುಟುಂಬಗಳನ್ನು ಸೇರಿದರು.
ಆ ಹೆಣ್ಣು ಮಕ್ಕಳ ಹೇಳಿಕೆಯಿಂದಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ಸತ್ಯವೊಂದು ಹೊರಬಂದಿತು. ಈ ಸೌದಾಮಿನಿ ಸಾಮಾನ್ಯದವಳಲ್ಲ, ಹೆಣ್ಣು ಮಕ್ಕಳನ್ನು ಮಾರುವ ವ್ಯಾಪಾರ ನಡೆಸುತ್ತಿದ್ದಾಳೆ, ಹೆಣ್ಣಿನ ತಲೆಹಿಡಿಯುವ ದಂಧೆ ಮಾಡಿ ದುಡ್ಡು ಗಳಿಸುತ್ತಿದ್ದಾಳೆ ಇನ್ನು ಮುಂತಾದ ಆರೋಪಗಳು ಸಾಕ್ಷಿ ಸಮೇತ ಋಜುವಾತಾಯಿತು. ಜೈಲು ಶಿಕ್ಷೆಯೂ ಆಯಿತು.
ಹೀಗೆ ಸತ್ಯ ಯಾವತ್ತಿದ್ರು ಬೂದಿ ಮುಚ್ಚಿದ ಕೆಂಡ ಇದ್ದಂತೆ. ಅದನ್ನು ಮುಟ್ಟಿದರೆ ಸುಡದೆ ಮಾತ್ರ ಬಿಡದು..