ಅಪ್ಪನ ಕನಸು
ಅಪ್ಪನ ಕನಸು
ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.
ಕನಸು.
ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂದು ಹೇಳುವುದನ್ನು ಕೇಳಿದ್ದೇನೆ. ಹೌದು ಪ್ರತಿಯೊಬ್ಬರ ಮದುವೆ ಹೀಗೆಯೇ ಆಗಬೇಕೆಂದು ಭಗವಂತ ಮೊದಲೇ ನಿಶ್ಚಯಿಸಿರುತ್ತಾನೆ.. ಹಾಗಾಗಿ ಭೂಮಿಯ ಮೇಲಿನ ನಮ್ಮೆಲ್ಲರ ವಿವಾಹ ಅಥವಾ ವೈವಾಹಿಕ ಜೀವನ ದೇವರು ನಮ್ಮಿಂದ ಇರಿಸುವ ಹೆಜ್ಜೆ ಅಂತಾ ಹೇಳಬಹುದು.
ಸನ್ನಿಧಿ ತುಂಬಾ ಸಮಾಧಾನದ ಹುಡುಗಿ. ಪ್ರಕಾಶ್ ಹಾಗೂ ಕಲ್ಪನಾ ದಂಪತಿಗಳ ಮುದ್ದಿನ ರಾಜಕುಮಾರಿ ಅಂತಾನೆ ಹೇಳಬಹುದು. ಪ್ರಕಾಶ್ , ಕಲ್ಪನಾ ಮದುವೆಯಾಗಿ ಏಳು ಎಂಟು ವರುಷಗಳು ಕಳೆದರೂ ಸಹ ದೇವರು ಸಕಲ ಐಶ್ವರ್ಯ ಕೊಟ್ಟಿದ್ದರೂ ಆ ದಂಪತಿಗಳಿಗೆ ಮಕ್ಕಳಿರದ ಕೊರಗನ್ನು ಕೊಟ್ಟು ಬಹಳೇ ಕೊರಗುವಂತೆ ಮಾಡಿದ್ದ ಪ್ರಕಾಶ್ ಕಲ್ಪನಾ ಪೂಜಿಸುತ್ತಿದ್ದ ದೇವರು.
ಕೋಟಿ ರೂಪಾಯಿ ಖರ್ಚು ಮಾಡಲು ತಯಾರಿದ್ದರೂ ಸಹ ಯಾವ ವೈದ್ಯರಿಂದಲೂ ಸಹ ಆ ಒಂದು ಆಸೆ ಇಡೇರದೆ ತುಂಬಾ ನೋವನ್ನು ಅನುಭವಿಸಿದ್ದರು. ಇಷ್ಟೆಲ್ಲಾ ಆದ ಮೇಲೆ ಯಾವ ಪವಾಡ ಜರುಗಿತೋ ಗೊತ್ತಿಲ್ಲ. ಒಟ್ಟನಲ್ಲಿ ಸನ್ನಿಧಿ ಮಗಳಾಗಿ ಬಂದು ಆ ದಂಪತಿಗಳಿಬ್ಬರ ನೋವು , ಕೊರಗನ್ನು ದೂರ ಮಾಡಿದ್ದಳು..
ಅಪರೂಪಕ್ಕೆ, ಹಾಗೂ ಬಹಳ ದಿನಗಳ ನಂತರ ತಮ್ಮ ಜೀವನದಲ್ಲಿ ಹೊಸ ಕಿರುನಗೆ ಮೂಡಿಸಿದ ಆ ಮಗಳನ್ನು ತುಂಬಾ ಚೆನ್ನಾಗಿ,ಹಾಗೂ ಯಾವುದೇ ರೀತಿಯ ಕೊರತೆ ಇಲ್ಲದಿರುವ ಹಾಗೆ ಬೆಳೆಸಿದ್ದರು. ಪ್ರತಿಯೊಂದಕ್ಕೂ ಸನ್ನಿಧಿ, ಸನ್ನಿಧಿ, ಎಂದು ಪ್ರಕಾಶ್ ಯಾವಾಗಲೂ ಮಗಳ ಇಷ್ಟದಂತೆಯೇ ಎಲ್ಲವನ್ನು ನೆರೆವೇರಿಸುತ್ತಿದ್ದ. ಮನೆಯಲ್ಲಿ ಸಾಕಷ್ಟು ಐಶ್ವರ್ಯ ತುಂಬಿ ತುಳುಕುತ್ತಿದ್ದ ಕಾರಣ ಯಾವ ತೊಂದರೆ,ಕಷ್ಟ, ಇಲ್ಲದೆ ಮಗಳು ಬೆಳೆದು ಕಾಲೇಜು ಶಿಕ್ಷಣ ಪಡೆಯಲು ಬೆಂಗಳೂರೆಂಬ ಮಹಾನ್ ನಗರಿಗೆ ಬಂದಳು.
ಬೆಂಗಳೂರು ನಗರಕ್ಕೆ ಕಾಲಿಡುತ್ತಿದ್ದಂತೆ ಸನ್ನಿಧಿ,ಅಲ್ಲಿನ ಆ ಫಾಸ್ಟ್ ಹಾಗೂ ಕಲರ್ಫುಲ್ ಜೀವನಕ್ಕೆ ಮಾರು ಹೋದಳು. ಗೆಳತಿಯರ ಗುಂಪು ಕೂಡ ಹಾಗೆ ಕಲರ್ಫುಲ್ ಆಗಿತ್ತು.. ಇವಳೇನೂ ಯಾರಿಗೂ ಕಮ್ಮಿ ಇರಲಿಲ್ಲ. ಅಂದ ಚೆಂದದಲ್ಲಿಯಾಗಲಿ, ಹಣಕಾಸಿನಲ್ಲಿಯಾಗಲಿ ಆದರೆ ಸ್ವಭಾವ ಮಾತ್ರ ಅತೀ ಸಮಾಧಾನ ಹಾಗೂ ಮುಗ್ಧತೆಯಿಂದ ಕೂಡಿತ್ತು.
ಆ ಸಮಾಧಾನ, ಮುಗ್ಧತೆಯ ಗುಣವೇ, ರಾಹುಲ್ ನನ್ನು ಸೆಳೆಯುತ್ತಿತ್ತು. ಕಣ್ಣುಬಿಟ್ಟು ನೋಡಿದಲ್ಲೆಲ್ಲ ಸನ್ನಿಧಿ ಮುಖವೇ ರಾಹುಲ್ ಕಣ್ಣಿಗೆ ಬೀಳುತ್ತಿತ್ತು. ಅವಳ ಉದ್ದ ಕೇಶರಾಶಿ,ಆ ಸಂಪಿಗೆಯಂತಹ ಚೂಪನೆ ಮೂಗು, ಆ ಶ್ವೇತ ವರ್ಣ, ದಾಳಿಂಬೆ ಬೀಜದಂತೆ ಹೊಂದಿಸಿಟ್ಟ ಸುಂದರ ದಂತ ಕಾಂತಿ ಅಯ್ಯೋ, ನೋಡಿದರೆ ನೋಡಬೇಕೆನ್ನುವಷ್ಟು ಆಸೆ ಹುಟ್ಟಿಸುವ ಸೌಂದರ್ಯವತಿ ಸನ್ನಿಧಿಯಾಗಿದ್ದಳು. ಹೀಗಿದ್ದಾಗ ಪಾಪಾ ರಾಹುಲ್ ತಾನೇ ಏನು ಮಾಡಿಯಾನು? ಅವಳ ಹಿಂದೆ ಬಿದ್ದಿದ್ದ.
ಸನ್ನಿಧಿಗೆ ಈ ಪ್ರೀತಿ, ಈ ಹುಡುಗರು ಹಿಂದೆ ಅಲೆಯೋದು ಇಷ್ಟವಿರಲಿಲ್ಲ. ಎಷ್ಟು ಬೈದು ಬುದ್ಧಿ ಹೇಳಿದರೂ ರಾಹುಲ್ ಕೇಳುತ್ತಿರಲಿಲ್ಲ, ತನ್ನ ಪಾಡಿಗೆ ತಾನು ಅವಳಿಂದೆ ತಿರುಗಾಡುತ್ತಿದ್ದ.. ಸ್ನೇಹದ ಹೆಸರಲ್ಲಿ ನಂಟು ಬೆಳೆಸಿದ ರಾಹುಲ್ ಸನ್ನಿಧಿಗೆ ಕೆಲದಿನಗಳ ಮೇಲೆ ಪ್ರೇಮ ಸಂದೇಶ ಕಳಿಸಿದ್ದರಿಂದ ಸನ್ನಿಧಿ ರಾಹುಲ್ ನನ್ನು ದೂರ ಮಾಡಿದ್ದಳು. ಎಷ್ಟೇ ಬೈದರೂ ಆತ ಹಿಂದೆ ಹೋಗಲು ರೆಡಿ ಇರಲಿಲ್ಲ. ಹೀಗಾಗಿ ಯಾವಾಗ್ಲೂ ಅವಳ ಹಿಂದೇನೆ ಸುತ್ತುತ್ತಿದ್ದ.
ಆತನ ಅಲೆದಾಡುವಿಕೆ, ಆತನ ಒಳ್ಳೆಯತನ ಒಮ್ಮೊಮ್ಮೆ ಸನ್ನಿಧಿಯನ್ನು ಅವನತ್ತ ತಿರುಗಿ ನೋಡುವಂತೆ ಮಾಡುತ್ತಿತ್ತು. ಆಗ ರಾಹುಲ್ ಸ್ವರ್ಗವೇ ಸಿಕ್ಕಂತೆ ಖುಷಿಯಾಗುತ್ತಿದ್ದ..
ರಾಹುಲ್ ನ ಈ ಗುಣವೇ ಸನ್ನಿಧಿಗೆ ಇಷ್ಟವಾಗುತ್ತಿತ್ತು. ತಾನು ಎಷ್ಟೇ ದೂರ ಹೋಗೆಂದರೂ ಆತ ಪುನಃ ಪುನಃ ಅವಳ ಹತ್ತಿರ ಅವಳ ಪ್ರೇಮಕ್ಕಾಗಿ ಅಲೆಯುತ್ತಿದ್ದ.
ಕೊನೆಗೊಮ್ಮೆ ತನಗೆ ಗೊತ್ತಿಲ್ಲದಂತೆ ಅವಳು ಅವನ ಪ್ರೇಮನಿವೇದನೆಗೆ ಸಹಿ ಹಾಕಿಯೇಬಿಟ್ಟಳು. ರಾಹುಲ್ ಕೂಡ ತುಂಬಾ ಒಳ್ಳೆಯ ಹುಡುಗ. ಕಾಲೇಜಲ್ಲಿ ಒಳ್ಳೆಯ ಹೆಸರು ಮಾಡಿದ್ದ. ಒಟ್ಟಿನಲ್ಲಿ ಜೋಡುಹಕ್ಕಿಗಳಾಗಿ ಸೇರುವ ಕಾಲ ಒದಗಿ ಬಂದಿತ್ತು..
ಹಬ್ಬದ ನಿಮಿತ್ಯ ಊರಿಗೆ ಹೋದ ಸನ್ನಿಧಿ ತನ್ನ ತಂದೆಗೆ ರಾಹುಲ್ ವಿಷಯ ಹೇಳಿದಳು. ಅವಳಿಗೆ ತನ್ನ ತಂದೆ ತನ್ನ ಆಸೆಯನ್ನು ಯಾವುದೇ ಕಾರಣಕ್ಕೂ ತೆಗೆದು ಹಾಕಲ್ಲ ಎನ್ನುವ ಭರವಸೆ. ಆದರೆ ಆ ಭರವಸೆ ಈ ಸಲ ಕೆಲಸ ಮಾಡಲಿಲ್ಲ. ಯಾವ ತಂದೆ ತಾಯಿ ಆದರೂ ಸಹ ಮಕ್ಕಳ ಪ್ರತಿಯೊಂದು ಆಸೆ ಬಯಕೆಯನ್ನು ಕ್ಷಣಾರ್ಧದಲ್ಲಿ ಈಡೇರಿಸುತ್ತಾರೆ. ಆದರೆ ಅವರ ಮದುವೆ ವಿಷಯದಲ್ಲಿ ಮಾತ್ರ ನಿಷ್ಠುರರಾಗಿ ಬಿಡುತ್ತಾರೆ..
ಸಾಕಷ್ಟು ಆಸ್ತಿ ತುಂಬಿದ್ದರೂ ಸಹ ಮಗಳನ್ನು ತಾವಿಷ್ಟ ಪಟ್ಟ ಹುಡುಗನಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಹುಚ್ಚು ಆಸೆ ಪ್ರಕಾಶನದ್ದು. ಆದರೆ ಈ ಸಲ ಮಗಳೂ ಕೂಡ ರಾಹುಲ್ ಬೇಕೇ ಬೇಕು ಅಂತ ಹಠ ಹಿಡಿದು ತನ್ನ ಓದಿಗೂ ಕಲ್ಲು ಹಾಕಿ ಕೊಂಡಳು. ಕೊನೆಗೆ ಪ್ರಕಾಶ್ ತನ್ನ ಬ್ಯುಸಿನೆಸ್ ಪಾರ್ಟ್ನರ್ ಪ್ರಶಾಂತ ನ ಮಗ ಪ್ರೀತಮ್ ಜೊತೆ ನಿಶ್ಚಿತಾರ್ಥ ಮಾಡಲು ಅಣಿಯಾದನು . ರಾಹುಲ್ಗೂ ಈ ವಿಷಯ ತಲುಪಿತು. ಆಗ ಸನ್ನಿಧಿ ರಾಹುಲ್ ತಾವಿಬ್ಬರೂ ಗುಟ್ಟಾಗಿ ಮದುವೆ ಆಗುವುದಾಗಿ ನಿರ್ಧರಿಸಿದರು. ಆ ಪ್ರಕಾರ ಸನ್ನಿಧಿ ಒಂದಿನ ಯಾರಿಗೂ ಗೊತ್ತಾಗದಂತೆ ಮನೆಯಿಂದ ಹೋಗಿ ರಾಹುಲ್ ಜೊತೆ ದೇವಸ್ಥಾನದಲ್ಲಿ ಅವನೊಂದಿಗೆ ಪ್ರೇಮ ವಿವಾಹ ಮಾಡಿಕೊಂಡು ಬಂದು ತನ್ನ ತಂದೆಯ ಮುಂದೆ ನಿಂತಿದ್ದಳು...
ಮಗಳು ಸನ್ನಿಧಿಯ ಮದುವೆಯೇ ಅಪ್ಪನ ದೊಡ್ಡ ಕನಸಾಗಿತ್ತು. ಬಹಳ ವಿಜೃಂಭಣೆಯಿಂದ ಮಗಳ ಮದುವೆಯನ್ನು ತನ್ನ ಪಾರ್ಟನರ್ ಪ್ರಶಾಂತನ ಮಗ ಪ್ರೀತಮ್ ನೊಂದಿಗೆ ಮಾಡುವುದಾಗಿ ಕನಸು ಕಂಡಿದ್ದನು . ಆದರೆ ಮಗಳ ಗುಟ್ಟಿನ ಪ್ರೇಮ ವಿವಾಹ ಕನಸನ್ನು ಒಡೆದಿತ್ತು.