ಕಷ್ಟಪಟ್ಟರೆ ಫಲ ಉಂಟು
ಕಷ್ಟಪಟ್ಟರೆ ಫಲ ಉಂಟು
ಒಬ್ಬ ರೈತ. ರೈತನಿಗೆ ನಾಲ್ಕುಜನ ಗಂಡು ಮಕ್ಕಳು. ನಾಲ್ಕು ಜನರೂ ಶುದ್ಧ ಸೋಮಾರಿಗಳು. ಮೊದಲಿಂದ ಶಾಲೆಗೂ ಹೋಗದೆ ಕಾಲಕಳೆದರು. ಈಗ ಬೆಳೆದು ದೊಡ್ಡವರಾದರೂ ಯಾರಿಗೂ ಉಪಯೋಗವಿಲ್ಲ. ತಂದೆಗೆ ಇವರದೇ ಯೋಚನೆ.ಒಂದು ದಿನ ರೈತ ಪಕ್ಕದ ಊರಿಗೆ ಹೋದವನು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಊಟ ಮಾಡಿ ಮಲಗಿದವರು ಏಕೆ ರಾತ್ರಿ ಅಪ್ಪ ಬಂದಿಲ್ಲವೆಂದು ವಿಚಾರಿಸಲಿಲ್ಲ. ಬೆಳೆಗಾದಮೇಲೆ ತಾಯಿ ಇವತ್ತು ನಮಲ್ಲಿ ಯಾರಾದರೂ ಅಪ್ಪನಿಗೆ ಊಟಕೊಟ್ಟು ಬನ್ನಿ ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದಾಗಲೇ ಏನಾಯ್ತು ಅಂತ ಕೇಳಿದರು. ಊಟ ಕೊಟ್ಟು ಬರಲು ನಾಲ್ಕು ಮಕ್ಕಳು ಹೊರಟರು. ಅಲ್ಲಿ ಅಪ್ಪ ಮಲಗಿ ಬಿಟ್ಟಿದ್ದಾರೆ. ಎಂದೂ ಅಪ್ಪ ಮಲಗಿದ್ದು ಅದುವರೆಗೂ ನೋಡಿಲ್ಲ. ದಿನ ಪೂರ್ತಿ ಕೆಲಸ ಮಾಡಿದ್ದು ಮಾತ್ರ ಕಂಡಿದ್ದರು. ತಂದೆ ಹತ್ತಿರ ಕರೆದು ಮಕ್ಕಳಿಗೆ ಹೇಳಿದ. ನೋಡಿ ನನಗೆ ವಯಸ್ಸಾಯ್ತು. ಮೊದಲನಂತೆ ಶಕ್ತಿ ಇಲ್ಲ. ಆಳುಗಳನ್ನ ನಂಬಿ ವ್ಯವಸಾಯ ಮಾಡಕ್ಕಾಗಲ್ಲ. ನಿಮಗೆ ಅದರ ಅನುಭವಿಲ್ಲ. ನೀವು ಸುಖವಾಗಿರಲಿ ಅಂತ ಹಣ ಒಡವೆ ಎಲ್ಲ ಒಂದು ದೊಡ್ಡ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟು ಮನೆ ಹಿಂದೆ ಇರೋ ಹೊಲದಲ್ಲಿ ಹೂತಿಟ್ಟಿದ್ದೇನೆ. ನಾನು ಮನೆಗೆ ಬರ್ತೀನೋ ಇಲ್ವೋ ಗೊತ್ತಿಲ್ಲ. ಬೇರೆಯವರ ಪಾಲಾಗಕ್ಕೆ ಮೊದಲು ನೀವೇ ಅದನ್ನ ತೊಗೊಂಡು ಹಂಚಿಕೊಳ್ಳಿ ಅಂದ.
ಮನೆಗೆ ಹೋದವರೇ ರಾತ್ರಿಯಲ್ಲೇ ದೀಪ ಇಟ್ಟುಕೊಂಡು ಅಗೆಯಕ್ಕೆ ಪ್ರಾರಂಭ ಮಾಡಿದರು. ಎಂದೂ ಮಾಡದ ಕೆಲಸ ಮೊದ ಮೊದಲು ಬಹಳ ಕಷ್ಟ ಅನಿಸಿದರೂ ಹಣದ ಆಸೆಗೆ ಮತ್ತೆಮತ್ತೆ ಅಗೆದರು. ಬೆಳಗಾಗುವ ಹೊತ್ತಿಗೆ ಮುಕ್ಕಾಲು ಭಾಗ ಅಗೆದು ಆಗಿತ್ತು. ಮಾರನೇದಿನ ಮುಂದುವರೆಸಿ ಎಲ್ಲ ಕಡೆ ಹುಡುಕಿದರೂ ಪೆಟ್ಟಿಗೆ ಮಾತ್ರ ಕಾಣಲೇ ಇಲ್ಲ. ಒಳಗೆ ಬಂದು ಅಮ್ಮನಿಗೆ ತಿಳಿಸಿದಾಗ, ಇಷ್ಟು ಕಷ್ಟ ಪಟ್ಟು ಅಗೆದಿದ್ದೀರಿ ಸ್ವಲ್ಪ ಮಣ್ಣನ್ನ ಸಮ ಮಾಡಿ . ನಾನು ಬಿತ್ತನೆ ಬೀಜ ಕೊಡ್ತೀನಿ. ಪಕ್ಕದ ಭಾವಿಯಿಂದ ನೀರು ಹರಿಸಿದರೆ ಒಳ್ಳೆ ಬೆಳೆ ಬರುತ್ತೆ ಅಂದಳು . ಅವರಿಗೆ ಏನೂ ಅರ್ಥವಾಗಲಿಲ್ಲ. ಅಮ್ಮ ಹೇಳಿದ್ದು ಮಾತ್ರ ಮಾಡಿ ಸುಮ್ಮನಾದರು . ಒಂದು ದಿನ ಅಮ್ಮ ಗಿಡ ಕಿತ್ತು ಅದರ ಕೆಳಗೆ ಭೂಮಿಯಲ್ಲಿದ್ದ ಆಲೂಗಡ್ಡೆ ತೋರಿಸಿದಳು. ಹೀಗೆ ಎಲ್ಲವನ್ನು ಕಿತ್ತು ಚೀಲಗಳಿಗೆ ತುಂಬಲು ಹೇಳಿದಳು.ಮಾರನೇ ದಿನ ಗಾಡಿಯಲ್ಲಿ ಹಾಕಿಕೊಂಡು ಮಂಡಿಗೆ ಕೊಟ್ಟುಬರಲು ಹೇಳಿ, ಅನುಭವವಿದ್ದ ಮತ್ತೊಬ್ಬನನ್ನು ಜೊತೆಗೆ ಕಳುಹಿಸಿದಳು. ಅದು ಮಾರಿದಾಗ ಬಂದ ಹಣ ನೋಡಿ ಇವರಿಗೆ ಸಂತೋಷವಾಯ್ತು. ಇಷ್ಟು ಹಣವನ್ನು ಎಂದೂ ನೋಡಿದವರಲ್ಲ. ತಂದು ಅಮ್ಮನ ಕೈಲಿ ಕೊಟ್ಟು ಅಪ್ಪನಿಗೆ ಊಟ ಕೊಡಲು ಒಟ್ಟಿಗೆ ಹೋದರು. ಅಲ್ಲಿ ಆಸ್ಪತ್ರೆಯಲ್ಲಿ ತಂದೆ ಇರಲಿಲ್ಲ. ಪಕ್ಕದವರನ್ನ ಕೇಳಿದಾಗ ನೆನ್ನೆಯದಿನವೇ ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಹೋದರಲ್ಲಾ ನಿಮಗೆ ಗೊತ್ತಿಲ್ಲ ಅಂದರೆ ಏನರ್ಥ ಅಂದರು. ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿದಾಗ, ಹೌದೇ ಎಲ್ಲಿ ಹೋದರು. ಅವರಿಗೆ ನಿಮ್ಮದೇ ಯೋಚನೆ ಆಗಿತ್ತು. ಎಲ್ಲಿಗೆ ಹೋದರೂ ಮನೆಗೆ ಬರಲೇ ಬೇಕು ಎರಡು ದಿನ ನೋಡೋಣ. ಅಂದಳು. ಇದೆಲ್ಲಾ ತಂದೆ ತಾಯಿ ಊರಲ್ಲಿರುವ ಅತ್ತೆ ಸೇರಿ ಇವರಿಗೆ ಬುದ್ದಿಕಲಿಸಲು ಮಾಡಿದ ನಾಟಕ ಅಂತ ಅವರಿಗೆ ಗೊತ್ತಾಗಲೇ ಇಲ್ಲ. ಬಹಳ ದಿನಗಳ ನಂತರ ಒಂದು ದಿನ ತಂದೆ ಬಂದಾಗ ಹಣದ ಪೆಟ್ಟಿಗೆ ವಿಚಾರ ಬಂತು. ಅಮ್ಮ ಹೇಳಿದಳು ಹೇಗೂ ನಿಮ್ಮ ಅಪ್ಪಾನೂ ಇದ್ದಾರೆ ಅಗೆದು ನೋಡಿ ಸಿಗಬಹುದು ಎಂದಾಗ ಮಕ್ಕಳೆಲ್ಲಾ ಒಟ್ಟಿಗೆ ಈಗ ಬೇಡ ಬೆಳೆ ಇಟ್ಟಿದೀವಿ ಅಂದಾಗಅಪ್ಪನಿಗೆ ಸಂತೋಷವಾಗಿ ಹೇಳಿದ. ಯಾವ ಹಣದ ಪೆಟ್ಟಿಗೆನೂ ಇಲ್ಲ . ನಿಮ್ಮನ್ನ ಒಳ್ಳೆಯವರಾಗಿ ಮಾಡಿದ್ದು, ಪೆಟ್ಟಿಗೆ ಅನ್ನೋ ಒಂದು ತಂತ್ರ ಅಷ್ಟೇ ಅಂದ.ನಂತರ ವ್ಯವಸಾಯದಲ್ಲೇ ಸಾಧನೆ ಮಾಡಿ ಸುತ್ತಮುತ್ತಲ ಊರಿಗೇ ಚಿರಪರಿಚಿತರಾದರು ನಾಲ್ಕೂ ಜನ.