ಹುಲಿ ಮತ್ತು ಸಾಧು
ಹುಲಿ ಮತ್ತು ಸಾಧು
ಒಂದು ದಿನ ಬೇಡನೊಬ್ಬ ಕಾಡಿನಲ್ಲಿ ಭೇಟೆಯಾಡುತ್ತಾ, ಹುಲಿಯೊಂದನ್ನು ಹಿಡಿದು ತಂದು, ಪಂಜರದೊಳಗೆ ಬಂಧಿಸಿಟ್ಟ. ಪ್ರತಿದಿನವೂ ಅದಕ್ಕೆ ತಿನ್ನಲು ಮಾಂಸ ಹಾಗೂ ಕುಡಿಯಲು ನೀರನ್ನು ಕೊಡುತ್ತಿದ್ದ.ಸ್ವತಂತ್ರವಾಗಿ ಕಾಡಿನಲ್ಲೆಲ್ಲಾ ಅಡ್ಡಾಡಿಕೊಂಡು ಮನಸೋ ಇಚ್ಚೆ ಇದ್ದ ಹುಲಿಗೆ ಪಂಜರದಲ್ಲಿ ಬಂಧಿಯಾದಾಗ, ತುಂಬಾ ಬೇಸರವಾಗಿ, ಆ ಹಾದಿಯಲ್ಲಿ ಸುಳಿದಾಡುವವರನ್ನೆಲ್ಲಾ, ತನ್ನನ್ನು ಪಂಜರದಿಂದ ಬಿಡಿಸುವಂತೆ ಬೇಡಿಕೊಳ್ಳುತ್ತಿತ್ತು.
"ಹೇಳಿ,ಕೇಳಿ ಹುಲಿ,ಇದನ್ನೇನಾದರೂ ಹೊರಗೆ ಬಿಟ್ಟರೆ ನಮ್ಮ ಜೀವಕ್ಕೆ ಅಪಾಯ ತಪ್ಪಿದ್ದಲ್ಲ" ಎಂದುಕೊಂಡು,ಇದರ ಹತ್ತಿರ ಸುಳಿಯಲೂ ಜನರು ಹೆದರಿ,ದೂರದಿಂದಲೇ ಇದನ್ನು ನೋಡಿ,ಸುಮ್ಮನಾಗುತ್ತಿದ್ದರು.
ಒಮ್ಮೆ ಒಬ್ಬ ಸಾಧು, ಅದೇ ದಾರಿಯಲ್ಲಿ ಹೋಗುತ್ತಿದ್ದಾಗ, ಅವನನ್ನು ಕಂಡ ಹುಲಿ,ತನ್ನನ್ನು ಬಿಡಿಸುವಂತೆ ಪರಿಪರಿಯಾಗಿ ಕೇಳಿಕೊಂಡಿತು.
ಹುಲಿಯ ಅಸಹಾಯಕತೆಯನ್ನು ನೋಡಿದ ಆ ಸಾಧು,ಒಂದರಕ್ಷಣಕರಗಿಹೋದನು. ಆದರೆ ಅವನ ವಿವೇಕ ಅವನನ್ನು ಹಿಂದೆಯೇ ಎಚ್ಚರಿಸಿತು.ಅವನು ಹುಲಿಗೆ ಈ ರೀ ತಿ ಕೇಳಿದ.
"ಹುಲಿರಾಯ, ನಿನ್ನನ್ನು ಪಂಜರದಿಂದ ಹೊರಗೆ ಬಿಟ್ಟರೆ, ನೀನು ನನ್ನನ್ನು ತಿನ್ನದೇ ಇರುವೆಯಾ? ನಿನ್ನನ್ನು ನಂಬುವುದು ಕಷ್ಟ" ಎಂದು ಹೇಳುತ್ತಾ,ಆ ಸಾಧು ಮುಂದಕ್ಕೆ ಹೊರಟಾಗ,
"ಅಯ್ಯಾ, ಸಾಧು, ನಾನು ನಿನ್ನನ್ನು ಖಂಡಿತ ತಿನ್ನುವುದಿಲ್ಲ, ನಿನ್ನ ಮೇಲೆ ಆಣೆಯಿಟ್ಟು ಹೇಳುತ್ತೇನೆ. ನಿನಗೆ ನನ್ನಿಂದ ಯಾವ ತೊಂದರೆಯೂ ಇಲ್ಲ, ನನ್ನನ್ನು ಈ ಪಂಜರದಿಂದ ಬಿಡಿಸು, "
ಹುಲಿ ,ಸಾಧುವನ್ನುಅಂಗಲಾಚುತ್ತಾ ಬೇಡಿದಾಗ, ಸಾಧುವಿಗೆ ಮನ ಕರಗಿತು.
ಹುಲಿಯ ಮೇಲೆ ಕನಿಕರ ತೋರಿ, ಅದನ್ನು ಪಂಜರದಿಂದ ಮುಕ್ತಿಗೊಳಿಸಲು, ಪಂಜರದ ಬಾಗಿಲನ್ನು ತೆಗೆಯುತ್ತಿದ್ದನು.
ಅವನು ಬಾಗಿಲನ್ನು ತೆಗೆದಕೂಡಲೇ , ಹುಲಿ ಅವನ ಮೇಲೆ ಎರಗಿತು.
"ಅಯ್ಯೋ ಪಾಪಿ, ನಿನ್ನಂತಹ ನೀಚನನ್ನು ನಾನು ನಂಬಿದೆನಲ್ಲ,ನೀನು ಮಹಾ ಮೋಸಗಾರ" ಹುಲಿಯ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಾಧು ಕೂಗುತ್ತಾ ತನ್ನ ಕೊನೆಯ ಕ್ಷಣಗಳನ್ನು
ಎದುರು ನೋಡುತ್ತಿದ್ದನು.
ಅಷ್ಟರಲ್ಲಿ, ಎಲ್ಲಿಂದಲೋ ಬರುತ್ತಿದ್ದ ನರಿ, ಸಾಧುವಿನ ಈ ಪರಿಸ್ಥಿತಿಯನ್ನು ಕಂಡು, ಕನಿಕರದಿಂದ, ಹತ್ತಿರ ಬಂದಿತು.ಹೇಗಾದರೂ ಸರಿ, ಇವನ್ನು ಹುಲಿಯ ಕೈಯ್ಯಿಂದ ಬಿಡಿಸಬೇಕೆಂದು ನಿರ್ಧರಿಸಿ, ಅದು ಹುಲಿಯನ್ನು ಕೇಳಿತು.
"ಹುಲಿಯಣ್ಣ, ನೀನು ಇದುವರೆಗೂ ಎಲ್ಲಿ ಇದ್ದೆ,? ನನಗೆ ನಿನ್ನ ಸ್ಥಳ ತೋರಿಸು" ಎಂದು ಕೇಳಿದಾಗ, ಹುಲಿಯು ಆ ಸಾಧುವನ್ನು ಅಲ್ಲೇ ಬಿಟ್ಟು,ಮತ್ತೆ ಪಂಜರದ ಒಳಗೆ ಹೋಗಿ ಕುಳಿತು, ನರಿಯಣ್ಣನಿಗೆ
ತೋರಿಸುತ್ತಾ,
"ನರಿಯಣ್ಣಾ, ಇದೇ ನಾನು ಹಿಂದೆ ಇದ್ದ ಜಾಗ" ಎಂದಿತು.ತಕ್ಷಣ ನರಿಯಣ್ಣ, ಆ ಪಂಜರದ ಬಾಗಿಲನ್ನು ಹಾಕಿ, ಹುಲಿಯನ್ನು
ಮತ್ತೆ ಬಂಧಿಸಿತು.
ನರಿಯ ಉಪಾಯವನ್ನು ಮೆಚ್ಚಿದ ಆ ಸಾಧು, ಸಂತೋಷದಿಂದ ನರಿಯ ತಲೆಯನ್ನು ಮುಟ್ಟಿ,ಆಶೀರ್ವದಿಸಿದನು.
ಕಥೆಯ ನೀತಿ: ದುಷ್ಟರ ಮೇಲೆ ಕನಿಕರ ತೋರಬಾರದು. ಶಕ್ತಿಗಿಂತ ಯುಕ್ತಿ ಮೇಲು
ಸಾಧುಸಜ್ಜನರನ್ನು ಕಾಪಾಡಲು ದೇವರು ಅವರ ಬೆನ್ನ ಹಿಂದೆಯೇ
ಇರುತ್ತಾನೆ.