ವರುಣನಾರ್ಭಟ.
ವರುಣನಾರ್ಭಟ.
ರಾತ್ರಿ ಕಂಡ ಕನಸುಗಳೆಲ್ಲ ಹಸಿಯಾಗಿ
ಮಿಸುಕಾಡಿದೆಡೆಯೆಲ್ಲಾ ಕಸಿವಿಸಿಯಾಗಿ
ಮೂಡಿಸಿದ ಗುರುತುಗಳ ಕಚಗುಳಿಗೆ
ಕಣ್ಣ ಹೊಸಕಿ ನೋಡಿದಾಗ ...
ಅಯ್ಯೋ!...
ರಾಡಿಯಾದ ನೆಲವೆಲ್ಲಾ ಹಸೀ ಹಸೀ!!!!
ವರುಣನಾ ಆಗಮನ ಮನೆಯೊಳಗೇ
ಆರ್ಭಟಿಸಿರೆ,
ಬೊಬ್ಬಿರಿದರೂ ಇಲ್ಲಾರಿಗೂ
ಭಯವಿಲ್ಲವೆಂಬಂತೆ ನಿಯತ್ತಿನ ಸರಕಾರ.
ಕಿಕ್ಕಿರಿದ ಸಂದಿಗೊಂದಿಯಲಿ ಕೊಚ್ಚೆಗೇರಿಗಳು..
ಹರಿದು ಹೋದ ಜೀವಗಳ ಆಕ್ರಂಧನ,
ಕಂದಮ್ಮಗಳ ಪರದಾಟ,
ತೇಲಾಡುವ ವಾಹನಗಳ
ಭಯಂಕರ ದೃಶ್ಯ
ಕೇಳರಿಯದಷ್ಟು ಮಳೆ ಸುರಿಸುತ್ತಿರುವ
ತೂಬಿನ ಮೋಡಗಳು.
ಕೆಂಗೇರಿ ಮೋರಿಗಿಂತಲೂ
ಭೀಕರವಾಗಿ ತುಂಬಿ ಹರಿಯುತ್ತಿರುವ ರಸ್ತೆ ಬದಿಗಳು..
ವರುಣನೇಕೆ ಕೆಂಗಣ್ಣು ಬಿಟ್ಟ
ಕರುನಾಡ ಮೇಲೆ?
ಕಳವಳದ ಬದುಕು, ಆಹಾರ ನಾಶವಾಗಿ, ರೈತ ನಿರ್ಗತಿಕನಾದ.
ಬಿತ್ತಿದೆಲ್ಲೆಡೆಗೆ ನೆರೆಹಾವಳಿ ತಾಂಡವ,
ಕುತ್ತುಗಳ ತಂದೊಡ್ಡಿದ ಕೊರೋನಾಗಿಂತಲೂ ಭೀಕರ..
ಜಾನುವಾರುಗಳ ಪರದಾಟ, ಕೂಗಾಟ
ಕೇಳುವವರಿಲ್ಲ,
ಕಾವೇರಿ, ತುಂಗೆ, ಕೃಷ್ಣೆ ತುಂಬಿ ರಣಚಂಡಿಯಾಗಿದ್ದಾಳೆ..
ಅನ್ನ ನೀಡುವ ಕೈಗಳು ಕಂಗಾಲಾಗಿವೆ.
ಬೆನ್ನ ಹಿಂದಿನ ಸಾಲಗಳು ತೀರದಾಗಿವೆ.
ಗುಡಿಸಲುಗಳು ನೆಲಸಮವಾಗಿ, ಕಾಡುಮರಗಳು ಧರೆಗುರುಳುತಿವೆ.
ಮಡಿದ ಶ್ವಾನ, ಹೈನಗಳಿಗೆ ಅಳುವವರಿಲ್ಲ....
ಕೊಚ್ಚಿಹೋಗುತಿಹ ಆಸ್ತಿ ಪಾಸ್ತಿ, ವಾಹನಗಳಿಗೆ ತಡೆವವರಿಲ್ಲ.
ಬೆಚ್ಚಿಬೀಳಿಸುತಿದೆ ಭೋರ್ಗರೆವ
ವರುಣನಾವಾಂತರ...
ಸೋರುವ ಮನೆಯ ಮಾಳಿಗೆಗೆ
ತೇಪೆಹಚ್ಚಬಹುದೇ ಹೊರತು,
ಮನೆಯೇ ಕೊಚ್ಚಿಹೋದರೆಂತೊಡೆಯಾ?
ನೆರೆಯ ಹೊರೆ ಪ್ರತೀವರ್ಷಕೂ
ಬಾರದಿರಲಿಲ್ಲ.
ಬರೆಯ ಮೇಲೆ ಬರೆಯೆಂಬಂತೆ
ಕೊರೋನಾ ಜೊತೆಯೇ ಬಂತಲ್ಲಾ..
ದೇವನೊಬ್ಬನೇ ಏನು ಮಾಡಿಯಾನು?
ಮಾನವನದಕೆ ಹೊರತಾಗಿ, ತಾಗಿದನೆಲ್ಲ ಕಾನನದ ಮರಗಿಡಗಳನ್ನು ದೋಚಿದನು.
ಬರಡಾದ ಕಾಡುಮೇಡು, ಪ್ರಾಣಿಪಕ್ಷಿಗಳಿಗೆ ಗೂಡಿಲ್ಲ.
ಗುಡ್ಡಬೆಟ್ಟಗಳನೇಕ ಕನಿಜಗಳ ಸಂಪತ್ತು, ಕೊಳ್ಳೆಯಾಗಿ ನೆಲಸಮವಾದವು..
ಬಳ್ಳತುಂಬಿದ ಹಗೆಗಳೆಲ್ಲ ಬರಿದಾಗಿ
ಹಳ್ಳ ನೆರೆಬಂದು ಹರಿದು ಮನೆಗೇ
ನುಗ್ಗುತಿದೆ ಎಗ್ಗಿಲ್ಲದೆ...
ಹಾಯಿದೋಣಿ ತಂದು ಮುಳುಗುವವರನೆತ್ತಿ ಕಾಪಿಡುವ
ಸೈನಿಕರಿಗೊಂದು ನಮನವಿರಲಿ.
ಸಾಯುತ್ತಿರುವ ಮುದುಕರ ಪಾಡು
ಯಾರು ಕೇಳುವರಿಲ್ಲಿ?
ಆಯ್ದುಕೊಳ್ಳುವವರೇ ಹೆಚ್ಚು,
ತಾ ಮುಂದು ನಾ ಮುಂದು ಎಂದು.
ಗೌಣವಾದವು ಮಾಸ್ಕುಗಳು, ಮುಸುಕುಗಳು...
ಮೌನವಾದವು ಕೂಗುಗಳು, ಮುಳುಗಿ
ನೆರೆಯೊಳಗೆ...