ಕನ್ನಡ ನಮನ
ಕನ್ನಡ ನಮನ
ಜಗದ ಹೆಮ್ಮೆ ಭಾರತದ ದಿವ್ಯ ಜಾತೆ ಕನ್ನಡ.
ಶರಣ ಸಂತ ಮಹಾತ್ಮರ ಪುಣ್ಯಭೂಮಿ ಕನ್ನಡ.
ಸಂಸ್ಕಾರವ ಕಲಿಸುವಂತ ಭವ್ಯ ನುಡಿ ಕನ್ನಡ.
ಅನುದಿನವೂ ನಮಿಸುವೆನು ನನ್ನ ತಾಯಿ ಕನ್ನಡ.
ಈ ನೆಲದ ಮಣ್ಣಿನಲ್ಲಿ ಪ್ರೇರಣೆಗಳ ಲತೆಯಿದೆ.
ಇತಿಹಾಸದ ಪುಟಗಳಲ್ಲಿ ಕಡುಗಲಿಗಳ ಕತೆಯಿದೆ.
ಗುಡಿಗೋಪುರ ಶಿಲೆಗಳಲ್ಲಿ ಅತ್ಯದ್ಭುತ ಕಲೆಯಿದೆ.
ವಚನ ದಾಸ ಸಾಹಿತ್ಯದಲಿ ಬದುಕ ಕಲಿಸೊ ಛಲವಿದೆ
ಕನ್ನಡದ ಸವಿ ಸಂಸ್ಕೃತಿಗೆ ಬಹುರೂಪಿ ನೆಲೆಯಿದೆ.
ನಾಡು ನುಡಿ ಕೃತಿಗಳಲ್ಲಿ ಶ್ರೀಗಂಧದ ಸೆಲೆಯಿದೆ.
ನೆಲ ಜಲಗಳ ಸಿರಿ ಸೊಬಗು ಕೈಬೀಸಿ ಕರೆದಿದೆ.
ಕನ್ನಡಿಗರ ಸಾಧನೆಗಳು ಜಗದಗಲ ಮೆರೆದಿದೆ.
ಮತಿ ಶ್ರುತಿಗಳ ಜೊತೆಯಲಿ ಕನ್ನಡವ ನುಡಿಯಲು.
ಹೃದಯದಿಂ ಕೇಳುತಲಿ ಪಾವನವು ಕಿವಿಗಳು.
ನೂರು ಭಾಷೆ ಕಲಿತರೂನು ಕನ್ನಡವೇ ಉಸಿರಾಗಲಿ.
ಎಲ್ಲರೆದೆಯ ಮನ ದನಿಗಳಲ್ಲಿ ನಿತ್ಯವೂ ಹಸಿರಾಗಲಿ.
ವಿವಿಧ ಬಗೆಯ ಜನರು ಇಲ್ಲಿ ಬಾಳುತಿಹರು ಜೊತೆಯಲಿ.
ಶಾಂತಿ ಧರ್ಮ ಸೌಹಾರ್ದದ ಕನ್ನಡದ ಭುವಿಯಲಿ.
ಕನ್ನಡವ ಬಳಸಿ ಬೆಳೆಸೊ ಛಲವು ನಮ್ಮದಾಗಲಿ.
ನಮ್ಮೆಲ್ಲರ ಸಂಕಲ್ಪಕೆ ತಾಯಿ ಭುವನೇಶ್ವರಿ ಹರಸಲಿ.