ನಿಮಗಿದು ಹಬ್ಬದ ಕತೆ
ನಿಮಗಿದು ಹಬ್ಬದ ಕತೆ
ನಾನೂ ಇಂದು ನಿಮಗೆ ಈ ಕತೆಯನ್ನು ಹೇಳಲು ಇಷ್ಟ ಪಡುತ್ತೇನೆ. ಯಾವ ಕತೆ ಅಂತ ಕೇಳ್ತೀರಾ ಬನ್ನಿ ನೀವೇ ನೋಡಿ
ಪಾರ್ವತಿಯ ರೂಪಾಂತರ. ಪೂಜಿಸುವುದರಿಂದ ಸಂತುಷ್ಟಳಾಗಿ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತವೆ. ಚೈತ್ರ ಮೊದಲಾದ ಹನ್ನೆರಡು ಚಾಂದ್ರಮಾಸಗಳಲ್ಲೂ ಬರುವ ಶುಕ್ಲ ತೃತೀಯಾ ಮತ್ತು ಕೃಷ್ಣತೃತೀಯಾ ತಿಥಿಗಳಲ್ಲಿ ಗೌರಿಯನ್ನು ಬೇರೆ ಬೇರೆ ಹೆಸರುಗಳಿಂದ ಪೂಜಿಸುವ ವಿಧಾನ ಪುರಾಣಗಳಲ್ಲಿ ಉಕ್ತವಾಗಿದೆ. ತೃತೀಯಾತಿಥಿ ಮಾತ್ರವಲ್ಲದೆ ವೈಶಾಖ ಶುಕ್ಲಪಂಚಮಿ, ಜೇಷ್ಠ ಶುಕ್ಲ ಪ್ರಥಮಾ ಶ್ರಾವಣಮಾಸದ ಎಲ್ಲ ಮಂಗಳವಾರಗಳು, ಸೂರ್ಯ ಹಸ್ತ ನಕ್ಷತ್ರವನ್ನು ಪ್ರವೇಶಿಸುವ ದಿನ-ಕಾಲಗಳಲ್ಲೂ ಗೌರೀ ಪೂಜೆಯನ್ನು ಮಾಡಬೇಕೆಂದಿದೆ. ಗೌರ(ಹಳದಿ-ಬಿಳುಪು ಮಿಶ್ರ) ವರ್ಣದ ಶರೀರದಿಂದ ಕೂಡಿ ಪಾರ್ವತಿ ರೂಪಾಂತರವನ್ನು ತಳೆದುದರಿಂದ ಆಕೆಗೆ ಗೌರೀ ಎಂದು ಹೆಸರು ಬಂದಿದೆ. ಈ ವಿಚಾರವಾಗಿ ಒಂದು ಪೌರಾಣಿಕ ಕಥೆಯೂ ಇದೆ.
ಪುರಾಣ/ಇತಿಹಾಸ
ದಕ್ಷಬ್ರಹ್ಮನಿಗೆ ಕಾಳೀ ಎಂಬ ಮಗಳಿದ್ದಳು. ಆಕೆ ಕನ್ನೈದಿಲೆಯಂತೆ ಕಪ್ಪು ಬಣ್ಣದಿಂದ ಕೂಡಿದ್ದಳು. ದಕ್ಷ ಆಕೆಯನ್ನು ಈಶ್ವರನಿಗೆ ಕೊಟ್ಟು ವಿವಾಹವನ್ನು ಮಾಡಿದ್ದ. ಶಿವನೂ ಆಕೆಯೊಡನೆ ಸಂತೋಷದಿಂದಿದ್ದ. ಒಮ್ಮೆ ಆಸ್ಥಾನ ಮಂಟಪದಲ್ಲಿ ವಿಷ್ಣು ಮತ್ತು ದೇವತೆಗಳೊಡನೆ ಈಶ್ವರ ತನ್ನ ಪತ್ನಿಯನ್ನು ಕೃಷ್ಣ ವರ್ಣಳಾದ ಕಾಳಿಯೇ ಬಾ. ನಿನ್ನ ಬಣ್ಣ ಕಪ್ಪಾಗಿದ್ದರೂ ಸೌಂದರ್ಯದಿಂದ ಕೂಡಿದ ನಿನ್ನ ರೂಪ ನನಗೆ ಪ್ರಿಯವಾಗಿದೆ ಎಂದು ಹೇಳಿದ.
ಈ ಮಾತನ್ನು ಕೇಳಿದ ಕಾಳಿ ಲಜ್ಜಿತಳಾಗಿ, ದುಃಖಿಸಿ ತನ್ನ ಕಪ್ಪು ದೇಹವನ್ನು ನೀಗಲು ದೇವ ಸಮುದಾಯದೆದುರಿನಲ್ಲೇ ಅಗ್ನಿಪ್ರವೇಶಮಾಡಿ ಮತ್ತೆ ಪರ್ವತರಾಜನಿಗೆ ಮಗಳಾಗಿ ಗೌರವರ್ಣ ಶರೀರದಿಂದ ಕೂಡಿದವಳಾಗಿ ಹುಟ್ಟಿ ಈಶ್ವರನನ್ನೇ ವಿವಾಹವಾದಳು. ಈ ಬಗ್ಗೆ ಇನ್ನೊಂದು ಕಥೆ ಇದೆ. ಶುಂಭ ನಿಶುಂಭರೆಂಬ ದೈತ್ಯರು ಲೋಕಕಂಟಕರಾಗಿ ದೇವತೆಗಳನ್ನು ತೊಂದರೆಪಡಿಸುತ್ತಿರಲು ದೇವತೆಗಳೆಲ್ಲ ಪಾರ್ವತಿಯನ್ನು ಮೊರೆ ಹೊಕ್ಕರು.
ಆಗ ಪಾರ್ವತಿಯ ಶರೀರದಿಂದ ಕೌಶಿಕಿ ಎಂಬ ಸುಂದರಿ ಆವಿರ್ಭವಿಸಿ ಆ ರಾಕ್ಷಸರನ್ನು ಸಂಹರಿಸಿದಳು. ಕೌಶಿಕಿ ಆವಿರ್ಭವಿಸಿದಮೇಲೆ ಪಾರ್ವತಿ ಕಪ್ಪಾಗಿ ಕಂಡಳು, ಶಿವ ಆಕೆಯನ್ನು ಕಾಳಿ ಎಂದು ಕರೆದ. ಆಗ ಪಾರ್ವತಿ ತಪಸ್ಸುಮಾಡಿ ಗೌರಶರೀರವನ್ನು ಪಡೆದಳು.
ಕಥೆಯ ನಿರೂಪಣೆಯಲ್ಲಿ ಬದಲಾವಣೆ ಇದ್ದರೂ ಕಪ್ಪುಶರೀರವನ್ನು ತ್ಯಜಿಸಿ ಗೌರ ಶರೀರವನ್ನು ಪಡೆದ ಕಾರಣ ಪಾರ್ವತಿಗೆ ಗೌರಿ ಎಂಬ ಅನ್ವರ್ಥನಾಮ ಬಂತು ಎಂಬ ವಿಷಯ ಸತ್ಯ. ಭಾದ್ರಪದ ಶುದ್ಧ ತೃತೀಯಾ ದಿವಸಾದಿಯಾಗಿ ಪಾರ್ವತಿ-ಆವಿರ್ಭವಿಸಿದುದರಿಂದ ಆ ದಿವಸ ಸ್ವರ್ಣಗೌರೀವ್ರತವನ್ನು ತಪ್ಪದೆ ಆಚರಿಸುವುದು ಕರ್ನಾಟಕದಲ್ಲಿ ರೂಢಿಯಲ್ಲಿದೆ.