ನನ್ನೀ ಅವಸ್ಥೆಗೆ ಯಾರು ಹೊಣೆ
ನನ್ನೀ ಅವಸ್ಥೆಗೆ ಯಾರು ಹೊಣೆ
ನನ್ನ ಈ ಮುಗ್ಧತೆ ಪ್ರಕೃತಿಯಿಂದ ಬಂದ ಬಳುವಳಿ
ನಾ ಬಯಸಿದರೂ, ಇಲ್ಲದಿದ್ದರೂ ಅದು ನನ್ನದಲ್ಲವೇ?
ಮಾತು ಕಲಿಯದ ಕಾರಣ, ಅರಿವಿನ್ನೂ ಮೂಡದ ಕಾರಣ
ಮುಗ್ಧತೆ ಎಂದರೇನೆಂದು ನಾ ತಿಳಿಯಲಾರೆ, ಬಯಸಲಾರೆ,
ನಾನಿರುವ ರೀತಿ, ಯಾವ ದ್ವಂದ್ವಗಳಿಲ್ಲದೆ ಇರುವುದು,
ಮನಸಿಚ್ಚೆಯಂತೆ ವರ್ತಿಸುವುದು ಇವೆಲ್ಲ ಬಳುವಳಿಗಳಷ್ಟೆ;
ಕಲಿಕೆಯಲ್ಲಿ ಅಪಾರ ಕುತೂಹಲ ತುಂಬಿರಲು,
ಯಾವುದು ಏನು ಎಂದು ತಿಳಿಯುವ ಆತುರವಿರಲು,
ಸನಿಹದಲ್ಲಿರುವುದೆಲ್ಲವನು ಕೈಯಲ್ಲಿ ಹಿಡಿಯಲು ಎಣಿಸಿ
ಒಮ್ಮೊಮ್ಮೆ ರುಚಿ ನೋಡುತ ಕಾಲ ಕಳೆಯುತಿರಲು
ನನ್ನ ಜ್ಞಾನೇಂದ್ರಿಯಗಳು ತೋರಿದುದೆಲ್ಲವನು ನಂಬುತ
ಮುoದೊಮ್ಮೆ ಬರುವ ಅಪಾಯದ ಅರಿವು ನನಗಾಗದಾಯಿತ್ತು;
ನೆಲದ ಮೇಲೆ ತೆವಳುತ್ತಿದ್ದ ನಾನು ನಿಂತು ನಡೆಯುವಂತಾಗಿ
ಕಿವಿಗೆ ಕೇಳುವ ಶಬ್ದಗಳ ಕಡೆಗೆ ಹೆಚ್ಚಿನ ಗಮನ ಹರಿಸತೊಡಗಿ
ನಾನು ಯಾರೆಂಬ ತಿಳುವಳಿಕೆ ನಿಧಾನವಾಗಿ ಬರತೊಡಗಿತು
ಸರಿ-ತಪ್ಪು, ಬೇಕು-ಬೇಡ, ಒಳ್ಳೆಯದು-ಕೆಟ್ಟದು ಎಂಬ
ದ್ವಂದ್ವಗಳ ಪರಿಚಯ ಮನದಟ್ಟು ಮಾಡಿಕೊಳ್ಳುವಂತಾಯಿತು
ನಾನು ಬೇರೆ, ಇತರರು ಬೇರೆ ಎಂಬ ಅರಿವು ಬಂದೇ ಬಿಟ್ಟಿತು ;
ಸುರಕ್ಷಿತವಾದ ಗೂಡಿನಿಂದ ನಾನು ಹೊರಬರುತ್ತಲೆ
ಪ್ರಪಂಚದ ಹೊಸ ವಸ್ತುಗಳ ಪರಿಚಯ ಆಗತೊಡಗಿತು,
ಜೊತೆಗೇ, ನೋವು-ನಲಿವು, ಕಷ್ಟ-ಸುಖ, ಅಸೆ, ಭಯ ಎಲ್ಲವೂ
ಮನಸ್ಸಿನಲ್ಲಿ ದಾಳಿ ಮಾಡಿ ಆಕ್ರಮಿಸಿಕೊಂಡಿರುವಂತೆ ತೋರಿತು,
ಮುಂದೆ ಸಾಗುವುದರಲ್ಲಿಯ ಹೆಮ್ಮೆ, ಛಲ, ಧೈರ್ಯಗಳು
ಹಿಂದೆ ಉಳಿದೆಯಾದರೆ ಅಸಹಾಯಕತೆ, ಹೇಡಿತನ, ಭಯಗಳು
ಎಲ್ಲ ಭಾವನೆಗಳ, ಉದ್ವೇಗಗಳ ಅನುಭವವೂ ಬಂದಂತಾಯಿತು;
ಒಮ್ಮೆ ಏಕಾಂತದಲಿ ಕುಳಿತು ಹಿಂದಿನದೆಲ್ಲ ನೆನೆಸಿಕೊಳ್ಳಲು
ನನಗೆ ಪ್ರಕೃತಿಯಿಂದ ಬಂದಿದ್ದ ಬಳುವಳಿ ಇಲ್ಲದಂತಾಯಿತ್ತು,
ನನಗೇನು ಬೇಕು ಎಂದು ಸುಲಭದಿ ನಿರ್ಧರಿಸಲು ಆಗದೆ
ದ್ವಂದ್ವಲೋಚನೆಗಳಿಗೆ ಭಲಿಯಾಗಿ, ಎಲ್ಲವನ್ನೂ
ಆಯ್ಕೆಮಾಡಿಯೇ ಪಡೆದು ತೃಪ್ತನಾಗುವಂತಾಗಿತ್ತು,
ಸ್ವಚ್ಛಂದವಾದ ಮನಸ್ಸಿನಲ್ಲಿ ನಿರ್ಭಯನಾಗಿ ವಿಹರಿಸುತ್ತಿದ್ದ ನಾನು
ಅರಿವಿಲ್ಲದೆಯೇ ಯಾವುದೊ ಬಂಧನದಲ್ಲಿ ಸಿಲುಕಿಹೆನಲ್ಲ ಎಂದೆನಿಸಿತು,
ನನ್ನೀ ಅವಸ್ಥೆಗೆ ಯಾರು ಹೊಣೆ ಎಂಬ ಪ್ರಶ್ನೆಯೊಂದು ಕಾಡತೊಡಗಿತ್ತು.