ಅಂಜುವಿನ ಡ್ರೀಮ್..
ಅಂಜುವಿನ ಡ್ರೀಮ್..
ಅಮ್ಮ ಕಿರಿಚ್ತಾ ಇದ್ದಾಳೆ.'ಅಂಜು ಏನ್ಮಾಡ್ತಿದ್ದೀಯಾ? ಗೂಗ್ಲಿಯನ್ನು ಆಟವಾಡಿಸಿಕೊಂಡು ಬಾ'..ಆಗ್ಲಿ ಅಮ್ಮಾ, ಅಂಜು ಗೂಗ್ಲಿಯೊಂದಿಗೆ ಹೊರಡ್ತಾಳೆ..
ಮನೆಯಿಂದ ಹೊರಗೆ ಬಂದದ್ದೇ, ತಡ ಬಹಳ ಖುಷಿಯಲ್ಲಿ ಗೂಗ್ಲಿ ಓಡೋದಕ್ಕೆ ಶುರು ಮಾಡ್ತಾನೆ. ಪೊದೆ ಹತ್ರ ಒಂದು ಬೆಕ್ಕು. ಅದನ್ನು ಕಂಡಿದ್ದೇ ಅವನ ಸಿಟ್ಟು ನೆತ್ತಿಗೇರುತ್ತೆ.. ಅಟ್ಟಿಸಿಕೊಂಡು ಹೋದ ಅವನನ್ನು ಹಿಂಬಾಲಿಸಿಕೊಂಡು ಅಂಜು.. ಓಡ್ತಾ ಓಡ್ತಾ ಅವಳು ದಾರಿ ತಪ್ಪಿ ಬಹಳ ದೂರ ಬಂದಿರ್ತಾಳೆ. ಗೂಗ್ಲಿನೂ ಕಾಣಿಸ್ತಾ ಇಲ್ಲ.. ಅಮ್ಮ ಬಯ್ಯುವುದಂತೂ ಗ್ಯಾರಂಟಿ, ವಾಪಸ್ಸು ಹೋಗೋದಕ್ಕೆ ದಾರಿ ಗೊತ್ತಾಗ್ತಿಲ್ಲ, ಏನಾದರಾಗ್ಲಿ ಗೂಗ್ಲಿನ ಹುಡುಕ್ಕೊಂಡೇ ಹೋಗೋಣ ಅಂತ ಯೋಚಿಸಿಕೊಂಡು ಅಂಜು ಹಾಗೇ ಮುಂದೆ ಹೋಗ್ತಾಳೆ. ಸ್ವಲ್ಪ ದೂರ ನಡೆದ ಮೇಲೆ ಸಮೀಪವೇ ಒಂದು ನದಿ ಕಾಣುತ್ತೆ.. ಮುಂದೆ ಹೋಗ್ಬೇಕಂದ್ರೆ ನದಿ ದಾಟಿಯೇ ಹೋಗ್ಬೇಕು.ಅಲ್ಲೆಲ್ಲೂ ಗೂಗ್ಲಿ ಕಾಣ್ತಾ ಇರ್ಲಿಲ್ಲ. ನದಿ ಹತ್ತಿರ ಬರ್ತಾಳೆ. ನದಿಯ ಇನ್ನೊಂದು ಬದಿಗೆ ತಲುಪಿಸುವುದಕ್ಕೆ ನಾವಿಕನೊಬ್ಬ ತನ್ನ ನಾವೆಯೊಂದಿಗೆ ನಿಂತಿದ್ದ. ದೋಣಿಯೇರಿ ಕುಳಿತ ಅಂಜು ಆಚೆಯ ದಡ ತಲುಪ್ತಾಳೆ.
ಆ ಎತ್ತರಕ್ಕೆ ಬೆಳೆದಿದ್ದ ಮರಗಳು, ಜೀರುಂಡೆಗಳ ಶಬ್ದ ಭಯ ಹುಟ್ಟಿಸುವಂತೆ, ಇದ್ದು ಅಲ್ಲಿನ ಪಾವಿತ್ರತೆಯನ್ನು ಕಾಪಿಡಲೆಂದೇ ನಿಯಮಿತಗೊಂಡಂತೆ ಇದ್ದು ಯಕ್ಷಲೋಕಕ್ಕೆ ಕೊಂಡೊಯ್ದಂತಾಗಿತ್ತು ಅಂಜುವಿನ ಸ್ಥಿತಿ..
ದಾರಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ದಾಗ ಅಲ್ಲೊಬ್ಬಳು ಹೆಂಗಸು ಕಪ್ಪಗಿದ್ದರೂ, ಆರೋಗ್ಯವಂತಳಾಗಿ ಚೆನ್ನಾಗಿದ್ದಳು. ಬುಟ್ಟಿಯಲ್ಲಿ ಏನೋ ತಿನಿಸು ಮಾರಾಟ ಮಾಡ್ತಿದ್ಳು . ಆ ಹೆಂಗಸು ಅಂಜುವನ್ನು ಹತ್ತಿರ ಬರುವಂತೆ ಸನ್ನೆ ಮಾಡಿದಳು. ಹೋಗಿ ನೋಡಿದಾಗ, ಒಂದು ದೊಡ್ಡ ಗೊನೆಯಲ್ಲಿ ಚಿಕ್ಕ ಚಿಕ್ಕ ಚಿನ್ನದ ಬಣ್ಣದ ಹಣ್ಣುಗಳು ಕಂಡವು. ಅದೇನೆಂದು ಕೇಳಿದಾಗ ಅವಳು ಯಾವುದೋ ಅರ್ಥವಾಗದ ಭಾಷೆಯಲ್ಲಿ ಹೇಳಿದಳು. ಹಣ್ಣು ತಿನ್ನಲು ಬಹಳ ರುಚಿಯಾಗಿತ್ತು. ಒಂದಷ್ಟು ಕಟ್ಟಿ ಕೊಟ್ಪಳು..
ಸೂರ್ಯನ ಕಿರಣಗಳು ನೆತ್ತಿಯನ್ನು ಸುಡುತ್ತಿದ್ದವು. ಓರ್ವ ಮುದುಕ ಮರದ ನೆರಳಿನಲ್ಲಿ ಮರದ ಕೆತ್ತನೆ ಕೆಲಸದಲ್ಲಿ ನಿರತರಾಗಿದ್ದರು.
ಕೆಲವು ಮಕ್ಕಳು ಅವರ ಸುತ್ತಲೂ ಕುಳಿತು ಕಥೆಯನ್ನು ಕೇಳುತ್ತಿದ್ದರು.ಅಜ್ಜ ಅವರ ಪೂರ್ವಜರ ಬಗ್ಗೆ ಕಥೆ ಹೇಳೋದಕ್ಕೆ ಶುರು ಮಾಡಿದರು.
ಮಕ್ಕಳೇ, ಈ ಕಾಡು ನಮ್ಮ ಪೂರ್ವಜರಿಗೆ ದೇವರು.. ಪ್ರತಿಯೊಂದು ಗಿಡ, ಪಶು ಪಕ್ಷಿಗಳ ಜೊತೆಗೆ ಮಾತಾಡ್ತಾ ಇದ್ರು. ಯಾವ ರೋಗಾನ ಯಾವ ಗಿಡದಿಂದ ವಾಸಿ ಮಾಡ್ಬಹುದು ಎಂಬುದರ ಬಗ್ಗೆ ಅವರಿಗೆ ಅರಿವು ಇತ್ತು. ಅವುಗಳನ್ನು ಉಪಯೋಗಿಸಿಕೊಂಡು ಕಾಯಿಲೆ ಗುಣಪಡಿಸ್ತಿದ್ರು.
ಈ ಕಾಡಿಗೆ ಬ್ರಹ್ಮಗಿರಿ ಅಂತ ಹೆಸರಿತ್ತು. ಯಾರೇ ಆಗಲೀ ಕಾಡು ಪ್ರವೇಶ ಮಾಡ್ಬೇಕು ಅಂದ್ರೆ ಕಾಡು ಕಾಯೋ ದೈವದ ಅನುಮತಿ ಪಡಿಬೇಕಿತ್ತು. ಕಾಡು ಹಂದಿ ರೂಪದ ಪ್ರಾಣಿ ಪ್ರಕಟಗೊಂಡು , ದೈವದ ಅನುಮತಿ ಸಿಕ್ಕ ನಂತರವೇ ಕಾಡನ್ನು ಪ್ರವೇಶ ಮಾಡಬೇಕಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ದೈವದ ಕೋಪದಿಂದ ತಪ್ಪಿಸ್ಕೊಳ್ಳಕ್ಕೆ ಸಾಧ್ಯವೇ ಇರ್ಲಿಲ್ಲ. ಇಡೀ ಊರಿಗೆ ಊರೇ ದೈವದ ಕೆಂಗಣ್ಣಿಗೆ ಗುರಿಯಾಗಿ ನಾಶವಾಗಿ ಹೋಗ್ತಿತ್ತು.. ಅದಕ್ಕೆ ಯಾರೊಬ್ಬರೂ ದೈವದ ಗೆರೆ ದಾಟುವ ಸಾಹಸ ಮಾಡ್ತಿರ್ಲಿಲ್ಲ. ನಮ್ಮ ಜೀವನದಿ ಕಾವೇರಮ್ಮನ ಒಡಲು ಕೂಡಾ ಎಂದೂ ಬರಿದಾಗ್ತಿರ್ಲಿಲ್ಲ. ಯಾರೂ ನದಿ ನೀರನ್ನು ಹಾಳ್ಮಾಡ್ತಿರ್ಲಿಲ್ಲ. ಪ್ರಕೃತಿಯ ಮಡಿಲಿನಲ್ಲಿ ಬೆಳೆದ ಅವರಿಗೆ ಅದರ ಬಗ್ಗೆ ಪೂಜನೀಯ ಭಾವನೆ ಇತ್ತು. ಆದ್ರೆ ಈಗ ಮನುಷ್ಯನ ದುರಾಸೆಯು ಎಲ್ಲ ನಂಬಿಕೆಗಳನ್ನೂ ಮೆಟ್ಟಿ ನಿಂತು ಎಲ್ಲವನ್ನು ನುಂಗಿ ವಿನಾಶದ ಕಡೆ ತಿರುಗುವಂತೆ ಮಾಡಿದೆ.ಅಂತ ಅಜ್ಜ ನಿಟ್ಟುಸಿರು ಬಿಟ್ಟರು...
ಕಥೆ ಹೇಳಿ ಮುಗಿಸಿದ ಅಜ್ಜನ ಮುಖದಲ್ಲಿ ವ್ಯಥೆಯಿತ್ತು.ಒಂದೇ ಕ್ಷಣದಲ್ಲಿ ಢಂ!..ಎಂಬ ಶಬ್ದ.. ಭೂಮಿಯ ಒಡಲನ್ನು ಸೀಳಿಕೊಂಡು ಬಂದ ಆ ಎದೆ ನಡುಗಿಸುವ ಶಬ್ದಕ್ಕೆ ಹೆದರಿ ಕಣ್ಣು ಬಿಟ್ಟ ಅಂಜಲಿಗೆ ತಾನು ಇನ್ನೂ ಹಾಸಿಗೆಯಲ್ಲಿಯೇ ಮಲಗಿರುವುದು ಅವಳ ಗಮನಕ್ಕೆ ಬರುತ್ತದೆ. ಕಿಟಕಿಯಿಂದ ಪ್ರವೇಶಿಸಿದ ಬೆಳಗಿನ ಸೂರ್ಯನ ಹೊಂಗಿರಣಗಳು ಅವಳನ್ನು ಮುತ್ತಿಡಲು ಪ್ರಯತ್ನಿಸುತ್ತಿವೆ. ಗೂಗ್ಲಿಯೂ ಪಕ್ಕದಲ್ಲಿ ಮಲಗಿದ್ದಾನೆ. ಹಾಗಾದ್ರೆ ತಾನು ಇಷ್ಟು ಹೊತ್ತು ಕಂಡಿದ್ದು ಕನಸೇನಾ..ಅಂತ ದಿಗ್ಭ್ರಮೆಗೊಂಡ ಅವಳು ನಡೆದ ವಿಷಯವನ್ನು ತಿಳಿಸೋದಕ್ಕೆ ಅಮ್ಮನನ್ನು ಹುಡುಕಿಕೊಂಡು ಹೊರಟಳು…