ಒಡೆದ ಮನಸು
ಒಡೆದ ಮನಸು
ಇದೊಂದು ಸತ್ಯ ಘಟನೆಯ ಆದರಿಸಿದ ಕಥೆ .
ಹೆಸರುಗಳು ಸ್ಥಳ ಬದಲಿಸಲಾಗಿದೆ.
ಶಾನುಭೋಗ್ ಕೋದಂಡರಾಮಯ್ಯನವರು ಪ್ರೈಮರಿ ಶಾಲೆಯ ಮೇಷ್ಟ್ರು. ಇವರಿಗೆ ಇಬ್ಬರು ಮಡದಿಯರು .ಶ್ರೀಧರ ಮತ್ತು ರಘು ಒಂದೇ ತಾಯಿಯ ಮಕ್ಕಳು. ಹಾಸನದ ಹತ್ತಿರ ಹಳ್ಳಿ ಯಲ್ಲಿ ಹತ್ತು ಎಕರೆ ತೆಂಗಿನ ತೋಟ ,ಗದ್ದೆ ,ದೊಡ್ಡ ತೊಟ್ಟಿ ಮನೆ ಹಸು ಎಮ್ಮೆ ಎಲ್ಲಾ ಇದೆ. ಮಕ್ಕಳಿ ಬ್ಬರೂ SSLC ನಂತರ ತೋಟದ ಕೆಲಸವೇ ಮಾಡಿಕೊಂಡಿದ್ದರು. ಕೋದಂಡರಾಮಯ್ನವರಿಗೆ ನಿವೃತ್ತಿಗೆ ಒಂದು ವಾರಕ್ಕೆ ಮೊದಲು ಪತ್ನಿ ವಿಯೋಗವಾಗಿ ಆ ಶೋಕದಿಂದ ಹೊರ ಬರಲಾಗಿರಲಿಲ್ಲ. . ಒಂದು ವರ್ಷ ಕಳೆದ ನಂತರ ಒಂದೇ ತಿಂಗಳಲ್ಲಿ ಇಬ್ಬರು ಮಕ್ಕಳಿಗೂ ಮದುವೆ ಮಾಡಿದರು .ಇದಾದ ಆರು ತಿಂಗಳಿಗೆ ಸರಿ ಯಾಗಿ ಪತ್ನಿಯ ಕೊರಗಲ್ಲೇ ಇದ್ದ ಕೋದಂಡ ರಾಮಯ್ಯನವರ ದೇಹಾಂತ್ಯವಾಗಿ ಅಣ್ಣ ತಮ್ಮಂದಿರ ಮೇಲೆ ಎಲ್ಲಾ ವ್ಯವಹಾರದ ಜವಾಬ್ದಾರಿ ಬಿತ್ತು. ಮೊದಲಿಂದಲೂ ಹಿರಿಯ ಮಗ ಶ್ರೀಧರ ಹೇಳಿದ ಹಾಗೆ ರಘು ಕೇಳ್ತಿದ್ದ .ಅಣ್ಣನ ಮಾತೆಂದರೆ ವೇದವಾಕ್ಯ. ಹಳ್ಳಿಯಲ್ಲಿ ಎಲ್ಲರೂ ಅಣ್ಣ ತಮ್ಮಂದಿರು ಅಂದರೆ ಶ್ರೀಧರ ರಘು ಹಂಗೆ ಇರ್ಬೇಕಪ್ಪ ಅಂತಿದ್ರು. ಎಷ್ಟೋ ಜನ ಇವರನ್ನ ರಾಮ ಲಕ್ಷ್ಮಣ ಅಂತಾನೇ ಕರೀತಿದ್ರು. ಶ್ರೀಧರನಿಗೂ ತಮ್ಮ ಅಂದರೆ ಅದೇನೋ ಪ್ರೀತಿ. ಮನೆಗೆ ಏನು ತಂದರೂ ಮೊದಲು ತಮ್ಮನಿಗೆ ಆಮೇಲೆ ನನಗೆ ಅಂತಿದ್ದ. ಹೀಗಿತ್ತು ಅವರ ಅನ್ಯೋನ್ಯತೆ.
ಕಾಲಕ್ರಮೇಣ ಇಬ್ಬರಿಗೂ ಎರಡೆರೆಡು ಗಂಡು ಮಕ್ಕಳಾಯ್ತು.ರಘು ಹೆಂಡತಿ ಭವ್ಯ ಒಂದು ದಿನ ಮಕ್ಕಳನ್ನ ಕಾನ್ವೆಂಟ್ ನಲ್ಲಿ ಓದಿಸೋಣ ಈಗ ಹೋಗ್ತಾ ಇರೋ ಶಾಲೆ ಬೇಡ ಅಂದಳು. ಅದೇ ಶಾಲೆಯಲ್ಲಿ ಅಣ್ಣನ ಮಕ್ಕಳೂ ಓದುತ್ತಿದ್ದು ನಾಲ್ಕು ಮಕ್ಕಳಿಗೂ ಶಾಲೆಗೆ ಹೋಗಲು ಒಂದೇ school van ಇದೆ. ನಮ್ಮ ನಾಲ್ಕು ಹುಡುಗರಿಗೂ school ಫೀಸ್ ಮತ್ತು ಇತರೆ ಖರ್ಚುಗಳನ್ನೆಲ್ಲಾ ಅಣ್ಣಾನೇ ನೋಡಿಕೊಳ್ತಾ ಇದಾನೆ . ಈಗ ನಮ್ಮ ಮಕ್ಕಳನ್ನ ಬೇರೇ ಶಾಲೆಗೆ ಸೇರಿಸಿದರೆ ಅಣ್ಣ ಏನೆಂದುಕೊಂಡಾನು ಬೇಡ ಅಂದ. ಆದರೆ ಅವಳು ಒಪ್ಪಲಿಲ್ಲ ಹಠ ಹಿಡಿದಳು. ರಾತ್ರಿ ಅಣ್ಣನ ಹತ್ತಿರ ಈ ವಿಷಯ ಪ್ರಸ್ತಾಪ ಮಾಡಿದ. ಆಯ್ತು ಹಾಗೆ ಮಾಡಿ ಅವ್ರು ಎಷ್ಟಾದರೂ ಸಿಟಿಯಲ್ಲಿ ಬೆಳೆದವರು ಮಕ್ಕಳ ವಿದ್ಯಾಭ್ಯಾಸ ಮುಖ್ಯ ಮುಂದಿನ ವರ್ಷದಿಂದ ಒಳ್ಳೆಯ ಕಾನ್ವೆಂಟ್ ನೋಡಿ ಅವರಿಬ್ಬರನ್ನೂ ಅಲ್ಲೇ ಸೇರಿಸೋಣ ಯೋಚನೆ ಮಾಡಬೇಡ ಅಂದಾಗ ಬಾಗಿಲ ಬಳಿಯೇ ನಿಂತು ಕೇಳಿಸಿಕೊಳ್ಳುತ್ತಿದ್ದ ಅವನ ಹೆಂಡ ತಿಗೆ ಸಂತೋಷ ಆಯ್ತು. ಆದರೆ ರಘುಗೆ ಮಾತ್ರ ಬೇಸರ. ಎಂದೂ ಅಣ್ಣನ ಮುಂದೆ ನಿಂತು ಆ ರೀತಿ ತನಗಾಗಿ ಕೇಳಿದ್ದಿಲ್ಲ.
ಒಂದು ದಿನ ಭವ್ಯನ ಅಣ್ಣ ಅಕ್ಕ ಅವರ ಎರಡು ಮಕ್ಕಳು ಒಂದು ವಾರ ದಸರಾ ರಜಕ್ಕೆ ಅಂತ ಮನೆಗೆ ಬಂದರು. ಸಂಜೆ ಮನೆ ಮುಂದೆ ಎಲ್ಲರೂ ಕೂತು ಮಾತನಾಡುತ್ತಿದ್ದಾಗ ರಘು ದೊಡ್ಡ ತರಕಾರಿ ಮೂಟೆಯನ್ನ ತಲೆ ಮೇಲೆ ಹೊತ್ತು ತರುತ್ತಿದ್ದ. ಅಣ್ಣ ರಘು ಅವನ ಹಿಂದೆ ಬರೀ ಕೈನಲ್ಲಿ ಬರ್ತಿದ್ದ. ರಾತ್ರಿ ಊಟ ಆದಮೇಲೆ ಬಹಳ ಸೆಖೆ ನಾವೆಲ್ಲ ಹೊರಗೆ ಮಲಗುತ್ತೇವೆ ಅಂತ ಹೇಳಿ ಭವ್ಯ ಅಣ್ಣ ಅತ್ತಿಗೆ ಮಕ್ಕಳು ಹೊರಗಡೆ ಬಂದರು. ಭವ್ಯನ ಅಣ್ಣ ಅತ್ತಿಗೆ ಇಬ್ಬರೂ ಏನಮ್ಮ ನಿನ್ನ ಗಂಡ ಕೂಲಿಯವರಂತೆ ಮೂಟೆ ಹೊತ್ತು ಬರ್ತಾನೆ ಅವನ ಅಣ್ಣ ಯಜಮಾನನ ಹಾಗೆ ಕೈ ಬೀಸ್ಕೊಂಡು ಬರ್ತಾನೆ.
ಇವತ್ತೇ ನಾವು ನೋಡಿದ್ದು.ಹೀಗೇ ಆದ್ರೆ ಒಂದು ದಿನ ನಿನ್ನ ಗಂಡನ ಕೈಗೆ ಚಿಪ್ಪೇ ಗತಿ ಅಂದಾಗ ಭವ್ಯ ನನಗೂ ಅದೇ ಭಯ ಇವರಿಗೆ ಅಣ್ಣ ಅಂದರೆ ದೇವರ ಹಾಗೆ ಏನ್ಮಾಡೋದೋ ಗೊತ್ತಿಲ್ಲ ಅಂತ ಅತ್ತು ಕಣ್ಣು ಒರೆಸಿಕೊಂಡಾಗ ಹೆದರಬೇಡ ಏನಾದ್ರೂ ಮಾಡೋಣ ಅಂತ ಸಮಾಧಾನ ಮಾಡಿದರು.ಇವರು ಇದ್ದ ಒಂದು ವಾರ ಸಂಸಾರದಲ್ಲಿ ಸಾಕಷ್ಟು ಹುಳಿ ಹಿಂಡೋ ಕೆಲಸ ಮಾಡಿ ಹೊರಟರು.
ರಘು ಒಂದು ದಿನ ಒಬ್ಬನೇ ಇದ್ದಾಗ ಹೆಂಡತಿ ಭವ್ಯ ಹೇಳುವುದರ ಬಗ್ಗೆ ಯೋಚನೆ ಮಾಡ್ತಾ ತನಗೂ ಸ್ವಾತಂತ್ರ್ಯ ಬೇಕು ,ನಾಳೆ ಮಕ್ಕಳು ದೊಡ್ಡವರಾಗಿ ಅವರ ಮುಂದೆ ಎಲ್ಲದಕ್ಕೂ ಅಣ್ಣ ಅತ್ತಿಗೆಯ ಮುಂದೆ ಕೈಚಾಚಿದರೆ ಏನು ಚೆನ್ನ. ಈಗಲೇ ನಾನು ನನ್ನ ಸಂಸಾರ ಅಂತ ಜವಾಬ್ದಾರಿ ತೊಗೋ ಬೇಕು ಅಂತ ಒಂದು ನಿರ್ಧಾರಕ್ಕೆ ಬಂದ ಮಾರನೇ ದಿನ ಅಣ್ಣ ಒಬ್ಬನೇ ಇದ್ದಾಗ ಇದರ ಬಗ್ಗೆ ಪ್ರಸ್ತಾಪ ಮಾಡಿದ. ಶ್ರೀಧರ ಕೋಪ ಮಾಡ್ಕೊಳ್ದೆ ಎಂದೋ ಭಾಗ ಅಗೋ ಬದಲು ಈಗಲೇ ನಾವು ಚೆನ್ನಾಗಿದ್ದಾಗ್ಲೇ ಆಗೋದು ಒಳ್ಳೇದು . ಆಯ್ತು ಅಂತ ಒಪ್ಪಿ ತಿಳಿದ ಲಾಯರ್ ಒಬ್ಬರನ್ನ ಕರೆಸಿ ಶ್ರೀಧರ ಹೇಳಿದ ನೋಡಿ ನಮಗೆ ಸಮ ಭಾಗ ಏನು ಬೇಡ .ನನ್ನ ತಮ್ಮ ಕೇಳಿದ್ದೆಲ್ಲ ಕೊಟ್ಟು ಉಳಿದದ್ದು ನನ್ನ ಹೆಸರಿಗೆ ಬರೆದರೆ ಸಾಕು ಅವನನ್ನೇ ಮೊದಲು ಕೇಳಿ ಅಂದ. ಅಲ್ಲಿಯವರೆಗೂ ಸುಮ್ಮನಿದ್ದ ಭವ್ಯ ನಮಗೆ ಗದ್ದೆ ತೋಟ ಇರಲಿ ಅವರಿಗೆ ಈ ಮನೆ ಕೊಟ್ಟುಬಿಡಿ ಅಂದಾಗ ರಘು ಗೆ ಕೋಪ ನೆತ್ತಿಗೇರಿ ಅಣ್ಣ ಮನೆ ಇಟ್ಕೊಂಡು ಊಟಕ್ಕೆ ಮಣ್ಣು ತಿನ್ನಬೇಕಾ ಅಂದ.ಲಾಯರ್ ಹೇಳಿದರು ಕಾನೂನಿನ ಪ್ರಕಾರ ಮಾಡೋಣ ಯಾರ ಮಾತು ಬೇಡ ಅಂತ ಹೊರಟು ಹೋದ್ರು.ಆಸ್ತಿ ಭಾಗವೇನೋ ಆಯ್ತು .ಮನೆಯನ್ನೂ ಅರ್ಧಮಾಡಿ ಹಿಂದೆತಮ್ಮ ಮುಂದೆ ಅಣ್ಣ ವಾಸವಾಗಿದ್ದರು. ರಘು ಸಹಾಯ ಇಲ್ಲದೆ ಶ್ರೀಧರನಿಗೆ ಯಾವ ಕೆಲಸಾನೂ ಮಾಡಲು ಆಗ್ತಿಲ್ಲ. ಅಣ್ಣನ ಮುಂದಾಳತ್ವ ಇಲ್ಲದೆ ರಘುಗೆ ಯಾವ ಕೆಲಸ ಮಾಡಲೂ ಗೊತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ನೋಡುವರಿಲ್ಲದೆ ತೋಟ ಗದ್ದೆ ನೀರಿಲ್ಲದೆ ಒಣಗಿ ಹೋಯ್ತು. ಹಾಗೆ ಇಬ್ಬರ ಮನಸ್ಸುಗಳೂ ಕೆಡುತ್ತಾ ಬಂತು. ಪ್ರತಿ ದಿನದ ಖರ್ಚಿಗೆ ಬೇರೆ ದಾರಿ ಇಲ್ಲದೆ ಮನೆ ಬಿಟ್ಟು ಎಲ್ಲವನ್ನೂ ಮಾರಬೇಕಾಯ್ತು ಅಣ್ಣ ಶ್ರೀಧರ .ಇದರಿಂದ ಅಷ್ಟು ಪ್ರೀತಿಸುತ್ತಿದ್ದ ತಮ್ಮನ ಮೇಲೆ ಈಗ ದ್ವೇಷ ಹೆಚ್ಚಾಯ್ತು. ಎದುರಿಗೆ ನಿಂತರೂ ಮಾತಿಲ್ಲ. ಚಿಕ್ಕಪುಟ್ಟ ವಿಷಯಗಳಿಗೆಲ್ಲಾ ಜಗಳ. ಇಬ್ಬರ ನೆಮ್ಮದಿಯೂ ಹಾಳಾಯ್ತು.
ಕೆಲವು ವರ್ಷಗಳ ನಂತರ ಒಂದು ದಿನ ಶ್ರೀಧರ ಮನೆಯಲ್ಲಿ ಒಬ್ಬನೇ ಇದ್ದಾಗ ಮನೆಯ ಹಿಂದೆ ಏನೋ ಸದ್ದು ಗದ್ದಲ ಗುಸುಗುಸು ಎದ್ದು ಕಿಟಕಿಯಲ್ಲಿ ನೋಡಿದ .ಜನ ಸೇರಿದ್ದಾರೆ ಯಾರೋ ಶಾಮಿಯನ ಕಟ್ಟುತ್ತಿದ್ದಾರೆ.ಅಲ್ಲಿ ಏನಾದ ರೇನು .ನಮಗೇಕೆ ಅವರ ವಿಷಯ ಅಂತ ಮತ್ತೆ ಬಂದು ಕುರ್ಚಿಯಲ್ಲಿ ಕೂತಾಗ ಶಾಮಿಯಾನ ಕಟ್ಟುವವನು ಯಾರೋ ಇವರ ಮನೆ ಕಿಟಕಿಗೆ
ಕಟ್ಟುತ್ತಿದ್ದದು ಕಂಡು ಇಲ್ಲಿ ಕಟ್ಟು ಕೂಡದು ಬಿಚ್ಚು ಅಂತ ಹೇಳಿದ. ಅದಕ್ಕೆ ಸಾರ್ ಬೇರೆಲ್ಲೂ ಹತ್ತಿರ ಕಟ್ಟಲು ಜಾಗ ಇಲ್ಲ .ಒಂದು ಗಂಟೆ ಹೊತ್ತು ಅಷ್ಟೇ ಅಂದರೂ ಕೇಳದೆ ಮಚ್ಚು ತಂದು ಹಗ್ಗ ಕತ್ತರಿಸಿ ಬಿಟ್ಟ ಶ್ರೀ ಧರ. ಇಡೀ ಶಾಮಿಯಾನ ಅಲ್ಲಿ ಇದ್ದವ ರ ಮೇಲೆ ಬಿದ್ದು ಎಲ್ಲಾ ಓಡಿ ಹೋದರು. ಆದರೆ ಅಲ್ಲಿ ಇಟ್ಟಿದ್ದ ದೀಪ ದಿಂದ ಶಾಮಿಯಾನ ಧಗಧ ಗನೆ ಉರಿದು ಹೋಯಿತು. ಹೆದರಿ ಹೊರಗೆ ಓಡಿ ಬಂದು ನೋಡಿದ . ಯಾರಿಗೂ ಸಧ್ಯಕ್ಕೆ ಅಪಾ ಯ ಆಗಿಲ್ಲ ಅಂದುಕೊಳ್ಳುವಾಗ ಇವನ ಹೆಂಡತಿ ಆ ಮನೆಯಿಂದ ಆಚೆ ಬಂದದ್ದು ಕಂಡ. ನನಗೆ ಗೊತ್ತಿಲ್ಲದೆ ಇವಳು ಏಕೆ ಹೋದಳು ಕೇಳೋಣ ಅಂತ ಹಿಂದೆ ಬಂದು ಜೋರು ಧ್ವನಿಯಲ್ಲಿ ಕೇಳಿ ದ. ಅಳುತ್ತಾ ಒಳಗೆ ಹೋಗಿ ನೋಡಿ ಅಂದಾಗ ಏನೋ ಅನಾಹುತ ಆಗಿದೆ ಅಂತ ಎಷ್ಟೋ ವರ್ಷಗಳ ನಂತರ ಆ ಮನೆ ಒಳಗೆ ಕಾಲಿಟ್ಟ. ತಮ್ಮ ರಘು ದ್ವೇಶ ಆಸೆ ಅಸೂಯೆ ಕೋಪ ಎಲ್ಲದಕ್ಕೂ ಉತ್ತರವಾಗಿ ಅಳುವ ಜನರ ಮಧ್ಯೆ ನೆಮ್ಮದಿಯಾಗಿ ಮಲಗಿ ಬಿಟ್ಟಿದಾನೆ. ಇವನಿಗೆ ದುಃಖ ತಡೆಯಲಾಗಲಿಲ್ಲ. ವಿಧಿಯನ್ನ ಶಪಿಸುತ್ತ
ಹೊರಗೆ ಬಂದ ಶ್ರೀಧರ.