ಲಾಕ್-ಡೌನ್ ತಂದ ಬೆಳದಿಂಗಳು
ಲಾಕ್-ಡೌನ್ ತಂದ ಬೆಳದಿಂಗಳು
ಮರಿಯಪ್ಪನ ಪರಿವಾರವು ಅವಿಭಕ್ತ ಕುಟುಂಬ ವಾಗಿತ್ತು..!!
ಆದರೆ ವೃತ್ತಿ ಹಾಗೂ ವಿದ್ಯಾಭ್ಯಾಸದ ನಿಮಿತ್ತ.. ಅದು ಸಹ ವಿಭಕ್ತ ಕುಟುಂಬವಾಗಿ ಉಳಿದು ಬಿಟ್ಟಿತು ..!
ಅವರ ಮಕ್ಕಳು ಮರಿ.. ಮರಿಯಪ್ಪ ಹಾಗೂ ತಾಯವ್ವನನ್ನು (ದಂಪತಿ) ಮತ್ತು ಅವರ ಗ್ರಾಮವನ್ನು ತೊರೆಯುವ ಅನಿವಾರ್ಯ..
ಆದರೆ ಮರಿಯಪ್ಪ ತನ್ನ ಮಕ್ಕಳು, ಮೊಮ್ಮಕಳಿಗೆ ಒಂದು ನಿಯಮವನ್ನು ಇಟ್ಟಿದ್ದರು.. ಅದೆನೆಂದರೆ.. ಅವರ ಮರಣದ ವರೆಗೆ ಹಬ್ಬ, ಹರಿದಿನವನ್ನು ಒಟ್ಟಿಗೆ ಆಚರಣೆ ಮಾಡಬೇಕು ಎಂದು.. ಕೆಲವರ್ಷಗಳ ಕಾಲ ಈ ನಿಯಮ ಪಾಲನೆಯೂ ಆಯಿತು ಆದರೆ ಬೆಂಗಳೂರಿನ ಯಾಂತ್ರಿಕ ಜೀವನ ಅವರನ್ನು ಕಟ್ಟು ಹಾಕುವಲ್ಲಿ ಸಫಲವಾಗಿತ್ತು.. ಅವರು ಬಯಸಿಯು ಒಟ್ಟು ಸೇರಲಾಗುತ್ತಿರಲಿಲ್ಲ ಪಾಪ.. ಒಬ್ಬರು ಸಮಯ ಮಾಡಿಕೊಂಡು ಬಂದರೆ ಇನ್ನೊಬ್ಬರು ತಮ್ಮ ಕಾರ್ಯದಲ್ಲಿ ವ್ಯಸ್ತ..
ಈ ಬಾರಿಯ ಮಾತೇ ಬೇರೆ ಸ್ವಾಮಿ.. ಯಾಕ್ರೀ ಅಂತೀರಾ??
ಕರೋನ ಎಂಬ ಮಹಾಮಾರಿಯಿಂದ ಲಾಕ್ ಡೌನ್ ಎಂಬ ಬ್ರಹ್ಮಾಸ್ತ್ರ, "ವರ್ಕ್ ಫ್ರಂ ಹೋಮ್" ಎನ್ನುವ ಹೊಸ ಭಾರದ ದೆಸೆಯಿಂದಾಗಿ.. ಬೆಂಗಳೂರಿಗರು... ಖಾಯಿಲೆಯ ಉಲ್ಬಣ, ಹರಡಿಕೆಯ ನೋಡಿ.. ತನ್ನಿಂತಾನೆ ಯಾರು ಕರಯದೇ ಅವರವರ ಮೂಲ ಗೂಡಲ್ಲಿ ಒಂದುಗೂಡುವ ಅಣಿ ಆಗೋಯ್ತು..
ಎಲ್ಲರ ಆಗಮನದೊಂದಿಗೆ ಮರಿಯಪ್ಪ ಹಾಗೂ ತಾಯವ್ವನಿಗೆ ಸಂತಸವೋ ಸಂತಸ.. ..
ಆದರೆ ಅವರ ಮಕ್ಕಳು, ಸೊಸೆಯರ ವಿಚಾರಧಾರೆಯಲ್ಲಿ ಇದೊಂದು ಅನಿವಾರ್ಯ ಅಷ್ಟೇ ಅನ್ನಿಸಿದ್ದೀತು ಆ ಕ್ಷಣ ..
** ತಾಯವ್ವ ಖುಷಿಯಿಂದ ಶಕ್ತಿ ಮೀರಿ ಮಕ್ಕಳಿಗೆ ಉಣ ಬಡಿಸಲು ಖಾದ್ಯಗಳ ಅಣಿ ಮಾಡ ತೊಡಗಿದಳು..
ಸೊಸೆಯಂದಿರಿಗೊ.. ಅಯ್ಯೋ ನಮ್ಮನೆಲೇ ಇದ್ದಿದ್ದರೆ ಏನೋ ಒಂದು ಕದಡಿ ತಿಂದು ಮಲಗ್ಬೋದಿತ್ತು.. ಇಲ್ಯಾರು ಪಲ್ಯ ಚಟ್ನಿ ಅಂತ 10 ತರದ್ದು ಇಷ್ಟು ಜನಕ್ಕೆ ಮಾಡಾಕ್ತಾರೆ ಅನ್ನೋ ಅಸಡ್ಡೆ.. ಅರೆ ಮನಸಿನೊಡನೆ ಕಾಟಾಚಾರಕ್ಕೆ ಅಡುಗೆಮನೆ ಸೇರಿ ಸಹಾಯ ಮಾಡಲು ನಿಂತರು
ಆದರೆ ಪಟಪಟ ಅಲ್ಲಿಲ್ಲಿಯ ಮಾತನಾಡುತ್ತಾ ಕೆಲಸ ಮುಗಿದದ್ದೆ ತಿಳಿಯಲಿಲ್ಲವಲ್ಲ ಎಂಬ ಯೋಚ್ನೆ..
ಮೊದಲನೇ ಸೊಸೆ : ಅತ್ತೆ.. ಕೆಲ್ಸ ಆಯ್ತು.. ಯಾಕೋ ಸೊಂಟನೋವು.. ನಾ ಸ್ವಲ್ಪಹೊತ್ತು ಮಲಗ್ತೀನಿ
ತಾಯವ್ವ: ಸರಿನಮ್ಮ..
ಮಗಳು: ಅಮ್ಮ.. ನೀನು ಚೂರು ರೆಸ್ಟ್ ಮಾಡು.. ನಾನು ಮತ್ತೆ ಚಿಕ್ಕತ್ತಿಗೆ ಸೇರಿ .. ಪಾತ್ರೆ ತೊಳಿತೀವಿ.. ಅಲ್ವಾ ಅತ್ತಿಗೆ?
ಚಿಕ್ಕ ಸೊಸೆ : ಇಲ್ಲಾ ಆರತಿ ಚಿಂಟೂಗೆ ಊಟ ತಿನ್ಸೋ ಟೈಮ್ ಆಯ್ತು (ಆಕೆ ಕುಂಟು ನೆಪ ಒಡ್ಡಿ ಮೊಸರನ್ನದ ಜೊತೆ ಪರಾರಿ) ಹುಶ್.. ಅಪ್ಪಾ.. ನಾನೇ ಪಾತ್ರೆ ತೊಳೆಸಕ್ಕೆ ಕೆಲಸದವರನ್ನ ಇಟ್ಕೋಂಡಿನಿ.. ಇವ್ಳು ನನ್ನೇ ಕರೀತಾಳೆ ತೊಳಿ ಅಂತಾ..
( ಆಕೆ ಗೊಣಗುತ್ತಾ.. ತನ್ನ ಮಗುವಿನ ಬಳಿ ಹೊರಟಳು....)
ಚಿ. ಸೊ : ಚಿಂಟೂ ತಿನ್ನು ರಾಜ (ಮಗುವಿನ ಹಿಂದೆ ಓಡುತ್ತಾ)
ಚಿಂಟೂ: ಮೊಬ್ಬಲ್.. ಕತೆ.. ಡಾನು.. (ಮೊದಲು ನುಡಿಯುತ್ತಾ..)
(( ಅಪಾರ್ಟ್ಮೆಂಟ್ನಲ್ಲ ಸ್ಥಳ ಇರಲಿಲ್ಲ.. ಆದರೆ.. ಇಲ್ಲಿ ವಿಶಾಲ ಅಂಗಳ.. ಮಗು.. ಅಲ್ಲಿಂದಿಲ್ಲಿ ಆಡುತ್ತಲೇ ಇತ್ತು..
ಹುಣ್ಣಿಮೆಯ ರಾತ್ರಿಯದು.. ಅಂಗಳ ಬೆಳಕಿನಿಂದ ತುಳುಕುತ್ತಿತ್ತು..
ಚಿ. ಸೊ : ಫೋನ್ನಲ್ಲೀ ಚಾರ್ಜ್ ಇಲ್ವೋ ಮಾರಾಯ.. ಇವತ್ತೊಂದಿನ ಹಂಗೆ.. ತಿನ್ನೋ.. ಇಲ್ಲೇನ್ 28 ಚಾರ್ಜ್ ಪಾಯಿಂಟ್ಸ್ ಇಲ್ಲ.. ಎಲ್ರು ಯೂಸ್ ಮಾಡ್ತಾ ಇದ್ದಾರೆ..
ಲೊ.. ತರುಣ್ ನಿನ್ ಮೊಬೈಲ್ ಆದ್ರು ಕೊಡೊ ಊಟ ಮಾಡೊವರ್ಗೆ..
ತರುಣ್ : ಚಿಕ್ಕೀ.. ಗೇಮ್ ಆಡ್ತಿದಿನಿ.. ಡೊನ್ಟ್ ಡಿಸ್ಟರ್ಬ್
ಚಿ. ಸೊ : ಕರ್ಮ.. ಇದಕ್ಕೆ ಇಲ್ ಬರಲ್ಲ ಅಂದೆ.. ಇವ್ರು ಕೇಳಿಲ್ಲ.. ಏನೋ ಎಲ್ರು ಬರ್ತಾರೆ ಬಾರೆ ಅಂತೆ ಅಲ್ಲೆ ಇದಿದ್ರೆ ಆಗಿರೊದು..ಇವನೊಬ್ಬ ತರ್ಲೆ.. ಒಂದ್ ಸ್ವಲ್ಪ ತಿನ್ನೋ..
ಚಿಂಟು: ಇಲ್ಲ.. ಮೊಬ್ಬ ಕೊಡು..ಊಟ ಇಲ್ಲ.. (ಹಠ ಮಾಡುತ್ತ)
ಜಯ: ಅತ್ತೆ.. ಕೊಡಿ ನಾನು ತಿನ್ಸ್ತೀನಿ..
ಚಿ. ಸೊ : ಸರಿ
ಜಯ: ಚಿಂಟೂ ಅಲ್ನೋಡು ಚಂದಾ ಮಾಮ ನಿನ್ನ ನೊಡ್ತಾ ಇದ್ದಾನೆ.. (ಮಗು ಚಂದ್ರನ್ಧ ನೋಡ್ತ ಬಾಯಿ ತೆರಿತು) ಅದ್ಕು ಊಟ ಬೇಕಂತೆ.. ಅದು ಬಂದ್ರೆ ಎಲ್ಲ ತಿಂದು ಬಿಡುತ್ತೆ.. ನಿಂಗೆ ಹಸಿವಾಗಲ್ವ ಆಮೇಲೆ? ಬೇಗ ಬೇಗ ಖಾಲಿ ಮಾಡು ಆಯ್ತ? ಎಲ್ಲಿ ಆಆಆ ಮಾಡು.. ( ಐದಾರು ತುತ್ತು.. ತಿನ್ನಿಸಿದಳು.. ಮಗುವಿನ ಕಣ್ಣಲ್ಲಿ ಏನೋ ಆಶ್ಚರ್ಯ.. ಭಯ.. ಕೂತೂಹಲ ಚಂದ್ರನನ್ನು ಕಂಡು.. ಹಾಗೂ ಒಂದು ಸಣ್ಣ ಆಸೆ ಕೂಡ...)
ಚಿಂಟು: ಮಾಮ ಬಾ.. ಆಟ.. ಊಟ ತಗೋ.. (ಕಣ್ಣುಗಳರಳಿಸಿ.. ಬಾ ಬಾ ಎಂದು ಆಗಸದತ್ತ ಕೈಬೀಸಿ.. ತನ್ನೊಡನೆ ಊಟ ಮಾಡಲು ಆಹ್ವಾನಿಸಿದ..)
[ಆತನ ತಾಯಿ ಮತ್ತು ಜಯ ಮುಸಿ ನಕ್ಕರು.. ಆತನ ಮುಗ್ಧತನ ಅವರವರ ಚಿಕ್ಕಂದಿನ ದಿನಗಳನ್ನು ನೆನಪು ಮಾಡಿದವು ಒಂದು ನಿಮಿಷ..
ಎಲ್ಲರ ತಾಯಿಯಂತೆ ಆತನ ತಾಯಿಯು ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ತೋರಿಸಿ ಚಂದ್ರ ಧರೆಗಿಳಿದು ಬಂದ ನಿನಗಾಗಿ ಎಂದು ಹುಸಿ ನುಡಿದು ತನ್ನ ಕಂದನ ಸಂತಸಕ್ಕೆ ಸಾಕ್ಷಿಯಾದಳು.. ]
ಚಿಂಟೂ: ಐ.... (ಅವ ಪಾತ್ರೆಯಲ್ಲಿ ಕೈ ಹಾಕಿ ಅದನ್ನು ಹಿಡಿಯಲು ಮುಂದಾದ)
ಜಯ: ಮುಟ್ಟಿದರೆ ಬಿಟ್ಟು ಹೋಗುವನು ಈ ಮಾಮ.. ದೂರದಿಂದಲೇ ನೋಡು.. ಇಲ್ಲಾಂದ್ರೇ ವಾಪಸ್ ಕಳುಸ್ತೀನಿ ಅಷ್ಟೇ (ತಟ್ಟನೆ ತಡೆದಳು)
ಚಿಂಟೂ: ಉಹೂಂ ಬೇಡ.. ಮಾಮ ನಿಂಗೆ ಊಟ ಕೊಡಲ್ಲ.. ( ಜಯನ ಕೈಯಿಂದ ಎಲ್ಲಾ ಊಟ ತಿಂದು ಮುಗಿಸಿ ಚಂದ್ರನ ಅಣಕಿಸಿದ )
ಜಯ: ಪಾಪ ಅವರಿಗೆ ಹಸಿವಂತೆ.. ಮನೆಗೆ ಕಳ್ಸಣಾ? ( ಮೆಲ್ಲಗೆ ಅವನ ಕಣ್ಣು ತಪ್ಪಿಸಿ ನೀರಿನಲ್ಲಿ ಕೈಯಾಡಿಸಿದಳು)
ಚಿ. ಸೊ : ಅಗೋ ಮೇಲೆ ಹೋದ ಮಾಮ ಟಾಟಾ ಮಾಡು..
( ಆತ ಅರೆಮನಸ್ಸಿನೊಡನೆ ಬೀಳ್ಕೋಟ್ಟ ಎನ್ನಬಹುದು)
*** ಮರಿಯಪ್ಪನ ಕೊನೆಮಗ ತನ್ನ ಮನದರಸಿಯ (girlfriend) ನೆನೆದು ಚಂದ್ರನಲ್ಲಿ ಆಕೆಯ ಮೊಗವನ್ನು ಕಲ್ಪಿಸಿ ಕೊಳ್ಳುತ್ತಾ.. ಆಯ್ಕೆಯಿಂದ ದೂರನಿದ್ದೇನೆಂಬ ಭಾವವನ್ನು ಸರಿದೂಗಿಸಲು ಮಂತ್ರ ಮುಗ್ಧನಾಗಿ ಕಳೆದು ಹೋಗಿದ್ದ ***
ಎಷ್ಟು.. ವಿಚಿತ್ರ ಅಲ್ವಾ? ಇರದವರನ್ನು ಇದ್ದಾರೆಂದು ಭಾವಿಸುವುದರ ಆ ಸುಖ?
ಮನೆಯ ಮೇಲ್ಮಾಳಿಗೆಯ (terrace) ಮೇಲೆ ಚಂದ್ರನ ಕಡೆ ಮುಖ ಮಾಡಿ ಕೂತು ಹಾಳೆಯಲ್ಲಿ ತೋಚಿದ್ದು ಗೀಚುತ್ತಾ, ಏನೋ ಯೋಚಿಸಿ ಮುಗುಳ್ನಗುತ್ತಾ ಕೂತಿದ್ದ ಒಬ್ಬಾತ
(( ಇನ್ನೇನು ಕೆಲಸ ನಿಂಗೆ ಅಂತ ಮನೆಯವರು ನೋಡಿಯೂ ನೋಡದ ಹಾಗೆ ಇದ್ದರು
ಈತ ತಾಯವ್ವನ ತಮ್ಮ... ಕಥೆಗಾರನಾಗುವ ಆಶಯದಿಂದ ಬೆಂಗಳೂರಿನ ಮೂಲೆ ಮೂಲೆಯಲ್ಲಿರುವ ನಿರ್ದೇಶಕರ ಹಿಂದೆ ಮುಂದೆ ಹೋಗಿ ತನ್ನ ಕಥೆ ಒಪ್ಪಿಸುವವ..
ಕೆಲವರು ಕೇಳದೇ ಹೊರಟ್ಟಿದರು, ಇನ್ನೂ ಕೆಲವರು ಅರ್ಧ ಕೇಳಿ ಆಮೇಲೆ ಕಾಲ್ ಮಾಡುವೆ ಎಂದು ಹುಸಿ ನುಡಿದರು..
ಇನ್ನೂ ಕೆಲವರು ಆತನ ಕಥೆಯನ್ನೇ ಕೇಳುವ ನೆಪದಲ್ಲಿ, ಅದೇ ಕಥೆಯನ್ನು ತಾವೇ ಮತ್ತೇ ರಚಿಸಿ ದುಡ್ಡು ಮಾಡಿಕೊಂಡವರೇ ಹೆಚ್ಚು...
ಅವನ ಬರಹ ಚಂದವಿದ್ದರೂ ಯಾರು ಅವಕಾಶ ಕೊಡದೇ , ಆತನ ಹಣ, ಸಮಯ, ಬರಹಗಳು, ಪ್ರತಿಭೆಯನ್ನು ಲೂಟಿ ಮಾಡಿ ಅವನನ್ನು ಚಿತ್ರಾನ್ನದ ಕರಿಬೇವಿನ ಹಾಗೆ ಪಕ್ಕಕಿಟ್ಟರು..
ಮನೆಯಲ್ಲಿಯೂ ಆತ ಇದ್ದೂ ಇಲ್ಲದಂತೆ...))
ತಾಯವ್ವನ ತಮ್ಮ : ಈ ಚಂದ್ರನ ಹುಣ್ಣಿಮೆ ಬೆಳಕು ನನಗೆ ಇನ್ನೂ ಬರಹಗಳನ್ನು ಗೀಚುವ ಹಾಗೆ ಮಾಡಿದೆ.. (ಮುಗುಳ್ನಗುತ್ತಾ..)
ತಾಯವ್ವ: ಊಟ ತಯ್ಯಾರಿದೆ.. ಎಲ್ಲರೂ ಕೈ ತೊಳೆದು ಕೊಂಡು ಬನ್ನಿ... (ಆಕೆ ಮನೆಯ ಒಳ ಅಂಗಳದಲ್ಲಿ ನಿಂತು ಎಲ್ಲರನ್ನೂ ಆಹ್ವಾನಿಸಿದಳು..)
ದೊ. ಮಗ: ತುಂಬಾ ಹಸಿವು... ಎಲ್ರೂಬೇಗ ಬನ್ರೋ... ಒಟ್ಗೇ ಊಟ ಮಾಡಿ ಎಷ್ಟೋಂದ್ ದಿನ ಆಯ್ತೂ.. (ಹೊಟ್ಟೆಯನ್ನು ಕೆರೆಯುತ್ತಾ)
(ಎಲ್ಲರೂ ಉದೋ... ಎಂದು ಬಂದು ನಿಂತರು ಅಡುಗೆಯ ಘಮ.. ಹಸಿವನ್ನು ದುಪ್ಪಟ್ಟು ಮಾಡಿತು.. )
ತಾಯವ್ವನ ಮೊಮ್ಮಗಳು : ಅಜ್ಜಿ.. ಅಜ್ಜಿ... ನಂಗೆ ಕೈ-ತುತ್ತು ಬೇಕು..
(ಉಳಿದ ಮೊಮ್ಮಕ್ಕಳು.. ಚೀರ ತೊಡಗಿದರು "ನಮಗೂ.. ನಮಗೂ.." ಎಂದು.. )
ದೊ. ಮಗ : ಅಮ್ಮಾ.. ಎಲ್ರುಗು ಕೊಟ್ಟ್ ಬಿಡು ಕೈ-ತುತ್ತು..
ಕಿರಿಯ ಮಗ : ಹೇಗೂ..ಹುಣ್ಣಿಮೆ ಇದೆ ಬೆಳದಿಂಗಳ ಊಟ ಮಾಡೋಣ್ವಾ? (ಉತ್ಸಾಹದಿಂದ ನುಡಿದ)
ಎಲ್ಲರೂ : ಹೌದು.. ಹೌದು.. ತುಂಬಾ ಮಜ ಬರುತ್ತೆ..
ತಾಯವ್ವ: ಸರಿ.. ಬೇಗ ಎಲ್ಲಾ ಅಡುಗೆ ಪಾತ್ರೆ ತಗೊಳ್ಳೀ..
(( ದೊಡ್ಡ ಪಾತ್ರೆಯಲ್ಲಿ ಎಲ್ಲಾ ಕಲಸಿ.. ಎಲ್ಲರ ಕೈಯಲ್ಲೂ ಹಪ್ಪಳವಿತ್ತು.. ಕೈ-ತುತ್ತಿನ ಉಂಡೆ ಮಾಡಿ ಹಂಚ ತೊಡಗಿದರು.. ))
ಮೊಮ್ಮಗ : ಅಜ್ಜಿ.. ಅಜ್ಜಿ..ಕಥೆ ಹೇಳು ಪ್ಲೀಸ್...
(( ಆಕೆ ಮೊಮ್ಮಕ್ಕಳ ಆಸೆ ತೀರಿಸಲು ಕಥೆಯನ್ನು ಹೆಣೆಯಲು ಶುರು ಮಾಡಿದರು....
ಮಕ್ಕಳೇ ಅಲ್ಲಾ..ಉಳಿದವರು ಸಹ ಕಣ್ಣರಳಿಸಿ ಅವರ ಕಥೆಯನ್ನು ಆಲಿಸ ತೊಡಗಿದರು..
ಹಾಗೇ ಮಧ್ಯದಲ್ಲಿ ಒಬ್ಬರಿಗೊಬ್ಬರು ಕಾಳೆಳಿಯುತ್ತಾ.. ಕಿಲಕಿಲ ನಗುವಿನ ಜೊತೆ ಕಿರಿಕಿರಿ ಜೀವನದ ಒತ್ತಡವನ್ನು ಕ್ಷಣಕಾಲ ಮರೆತು ದಿನಕ್ಕಿಂತ ಐದಾರು ತುತ್ತು ಹೆಚ್ಚೇ ತಿಂದು ತೇಗಿದರು..))
ಚಿ. ಮಗ: ಅಬ್ಬಾ.. ಹೊಟ್ಟೆ ಭಾರ ಆಗೋ ಅಷ್ಟು ತಿಂದೆ.. ನಾ ಇಲ್ಲೆ ಒಂದು ಸುತ್ತು ವಾಕ್ ಮಾಡ್ಕೊಂಡ್ ಬರ್ತೀನಿ..
(ಆತನ ಮನದರಸಿಯ ಜೊತೆ ಏಕಾಂತವಾಗಿ ಮಾತನಾಡಲು ವಾಕಿಂಗ್ ನೆಪವೊಡ್ಡಿದ.. )
ಮಕ್ಕಳು : ಚಿಕ್ಕ ಚಿಕ್ಕಪ್ಪ... ನಾವೂ ಬರ್ತೀವೀ ನಿಮ್ಜೊತೆಗೆ..
(( ಮತ್ತೆ.. ಮತ್ತೆ.. ಮಕ್ಕಳ ಜೊತೆ ಹೀಗೆ ಕಾಲ ಕಳೆಯಲು ಸಿಗುವುದಿಲ್ಲ ಎಂದು ನೆನೆದು ಅವನೂ ಹ್ಹೂ.. ಗುಟ್ಟಿದ..))
ಚಿ. ಮಗ: ಸರಿ.. ಎಲ್ರೂ.. ಬನ್ನಿ ಬನ್ನಿ..
ತಾಯವ್ವ: ಹಾಗೆ ವಾಪಸ್ ಬರ್ತಾ.. ಸೊಳ್ಳೆ ಬತ್ತಿ ತಗೊಂಡ್ ಬಾ..
ಚಿ. ಮಗ: ಸರಿ ಅಮ್ಮ..
ಚಿಂಟೂ: ಚಿಕ್ಕು ಬೂ... ( ಮೂಲೆಯಲ್ಲಿ ನಿಂತಿದ್ದ ಹಳೆಯ ಸೈಕಲ್ನತ್ತ ಬೆರಳನ್ನು ತೋರಿ..)
ಚಿ. ಮಗ: ಸೈಕಲ್ ಸವಾರಿ ಬೇಕಾ? . ಸರೀ.. ಬಂದೆ ಇರು..
(( ಆತ ಸೈಕಲ್ ನ ಚೈನ್ ಸರಿಮಾಡಿ ಸೀಟನ್ನು ಒದರಿ.. ಚಿಂಟುನನ್ನು ಕೂರಿಸಿ.. ಸೈಕಲ್ನ ತಳ್ಳುತ್ತಾ ಮುನ್ನಡೆದ..
ಉಳಿದ ಚಿಲ್ಟಾರಿ-ಪಿಲ್ಟಾರಿಗಳು ಅವನ ಸುತ್ತಲೂ.. ಅತ್ತಿತ್ತಲೇ ಕುಣಿಯುತ್ತ ಕುಪ್ಪಳಿಸುತ್ತಾ, ಕೇಕೆ ಹಾಕುತ್ತಾ ಹೊರಟರು...
ಆತನಿಗೆ ಏನೋ ಖುಷಿ.. ಮಕ್ಕಳನ್ನು ಈ ರೀತಿ ವರ್ಷಗಳ ನಂತರ ಒಟ್ಟಾಗಿ ನೋಡಿ.. ))
ಮಗು 1: ಏ... ಅಲ್ನೋಡ್ರೋ.. ಚಂದ್ರ.. ನಮ್ ಜೊತೆನೇ ಬರ್ತಿದ್ದಾನೆ.. ( ಎಲ್ಲಾ ಮಕ್ಕಳಿಗೂ ತೋರಿಸುತ್ತಾ..)
[[ ಮಕ್ಕಳು.. ಹಿಂದೆ ಮುಂದೆ ಓಡಿ ಹೋಗಿ.. ಚಂದ್ರ ಅವರನ್ನು ಹಿಂಬಾಲಿಸುತ್ತಾನೋ ಇಲ್ಲವೋ.. ಎಂದು ಪರೀಕ್ಷಿಸ ತೊಡಗಿದರು... ]]
ಮಗು 2: ಐ... ಹೌದು ಕಣೋ.. ಈಕಡೆ ಬಂದ್ರೂ ಬರ್ತಾನೆ.. ಆಕಡೆ ಬಂದ್ರೂನೂ..
ಚಿಂಟೂ: ಮಾಮ.. (ಆಗಸದತ್ತ ನೋಡಿ)
[[ ಇದೆಲ್ಲವನ್ನೂ ನೋಡಿ.. ಮರಿಯಪ್ಪನ ಕೊನೆಯ ಮಗನು ತನ್ನ ಬಾಲ್ಯದ ನೆನಪುಗಳತ್ತ ಜಾರಿದ..
ಅವನು ಚಿಕ್ಕಂದಿನಲ್ಲಿ ಅವನ ಅಣ್ಣಂದಿರ ಜೊತೆ ಹೀಗೇ ನಕ್ಕು ನಲಿದಿದ್ದ..!! ಅವನಿಗೂ ಚಂದ್ರ ತನ್ನ ಜೊತೆ ಬರುತ್ತಿದ್ದ.. ಎಂದು ಭಾಸವಿತ್ತು.. ಆ ವಯಸ್ಸಲ್ಲಿ.. ಅದನ್ನು ನೆನೆದು ಮೊಗದಲ್ಲಿ ಮುಗುಳ್ನಗೆ ಬಂತು.. ]]
ಜಯ: ಚಂದ್ರ.. ಅಲ್ಲೆ ಇರ್ತಾನೆ.. ಆದ್ರೇ ಅವನು ನಮ್ಮ ಜೊತೆ ಬರ್ತಾ ಇದ್ದಾನೆ ಅನ್ಸುತ್ತೆ ಅಷ್ಟೇ ಕಣ್ರೋ..
ಮಕ್ಕಳು : ಹೌದಾ? ವಾವ್ಹ..
(( ಹೀಗೆ.. ಅರ್ಧಗಂಟೆಗಳ ಕಾಲ ಸುತ್ತಾಡಿ, ಮನೆಗೆ ವಾಪಸ್ ಬಂದರು..))
[[[ ಆ ದಿನ ಎಲ್ಲರೂ ಒಟ್ಟಾಗಿ ಮನೆಯ ಮೇಲ್ಛಾವಣಿ ಮೇಲೆ.. ಮಲಗಿದರು.. ಹೇಗೂ ಬೇಸಿಗೆ... ಹೊರಗಿನ ವಾತಾವರಣ ಅವರಿಗೆ ಮುದ ನೀಡಿತು.. ಹಾಗಾಗಿ ಎಲ್ಲರೂ ಮೊದಲಿನಂತೆ ಒಟ್ಟಾಗಿ ನಿದ್ರೆಗೆ ಜಾರಿದರು.. ]]
*** ಈ ಬೆಳದಿಂಗಳ ದಿನವು ಎಲ್ಲರಲ್ಲಿ.. ಬದಲಾವಣೆ ತಂದತ್ತಂತೂ ನಿಜ..!!
ಆ ದಿನದ ನಂತರ ಎಲ್ಲಾ ಸೊಸೆಯಂದಿರು ಅನುಸರಿಸಿಕೊಂಡು.. ಕೆಲಸ ಮಾಡತೊಡಗಿದರು.. ಇದರಿಂದ ಕೆಲಸ ಹಂಚಿಕೆಯೂ ಆಯ್ತು, ಸಮಯ ಉಳಿಯಿತು ಹಾಗೂ ಎಲ್ಲರ ಮಧ್ಯೆ ಕಳೆದು ಹೋಗಿದ್ದ ಆ ಬಾಂಧವ್ಯ ಬೆಳೆಯಿತು **
ಕೆಲ ತಿಂಗಳ ನಂತರ....
ಬೆಂಗಳೂರಿನ ಲಾಕ್ ಡೌನ್, ಸಡಿಲ ವಾಯಿತು.. ಮಕ್ಕಳ ಆನ್ ಲೈನ್ ಕ್ಲಾಸ್ ಶುರುವಾದವು..
ದೊಡ್ಡವರ ಕೆಲಸಗಳು ಹೆಚ್ಚಾದವು, ಹಳ್ಳಿಯಲ್ಲಿ ನೆಟ್ವರ್ಕ್ ಅಭಾವ ಕಂಡು.. ಒಲ್ಲದ ಮನಸಿನೊಡನೆ.. ಬೆಂಗಳೂರಿನ ಹೈ-ಟೆಕ್ ಯಾಂತ್ರಿಕ ಜೀವನದ ಮೊರೆ ಹೋಗಲೇ ಬೇಕಾಯ್ತು..
ಕೆಲಸ ಮುಗಿಸಿ ದಣಿವಾದಾಗ, ಹಳ್ಳಿಯಲ್ಲಿ ಎಲ್ಲರ ಜೊತೆ ಕಳೆದ ನೆನಪಾದೊಡನೆ,..
ಇವರೆಲ್ಲರ ಮನದಲ್ಲಿ ಒಂದು ಯೋಚನೆ ಮೂಡಿ ಬಂತು.. ಅದೇನೆಂದರೆ
" ಈ ಜೀವನ ಮತ್ತೊಮ್ಮೆ ಜೀವಿಸುವಂತ್ತಿದ್ದರೆ..??
ಹೀಗಿತ್ತು.. ಮರಿಯಪ್ಪನ ಒಟ್ಟು ಕುಟುಂಬದ ಮೇಲೆ ಆ ಲಾಕ್-ಡೌನ್ ತಂದ ಬೆಳದಿಂಗಳು..!
ಸೊಸೆಯರು ಕೆಲಸ ಮಾಡಬೇಕಾಗುತ್ತದೆ ಅಂತ ಹಳ್ಳಿಯ ನೆರಳನ್ನು ತೊರದಿದ್ದರು..ಈಗ ಅವರಿಗೆ ಅವಿಭಕ್ತ ಕುಟುಂಬದ ಮೇಲೆ ಒಲವು ತಂತು..
ಆ ದಿನದ ಬೆಳದಿಂಗಳು ಪರಿವಾರದ ಕಳೆದು ಹೋದ ಬಾಂಧವ್ಯ, ಪ್ರೀತಿ, ಹಾಗೂ ಆ ಚಿಕ್ಕ ಮಗುವಿಗೆ ಒಂದು ಮಾಮ, ಹಾಗೂ ಒಬ್ಬ ಬರಹಗಾರನಿಗೆ ಇನ್ನೂ ಹೆಚ್ಚು ಬರೆಯ ಬೇಕೆಂಬ ಹುಮ್ಮಸ್ಸು, ಒಬ್ಬ ನವ ಪ್ರೇಮಿಗೆ.. ತನ್ನ ಮತ್ತು ತನ್ನ ಪ್ರೇಯಸಿಯ ನಡುವಿನ ಅಂತರ ಕಡಿಮೆ ಮಾಡಿತ್ತು..
ಆ ಬೆಳದಿಂಗಳ ಊಟ ಪ್ರೀತಿಯನ್ನು ಹಂಚಿತ್ತು, ಕಳೆದು ಹೋದ ಸುಖ, ಶಾಂತಿ.. ಮತ್ತೆ ಕೊಂಚ ಸಮಯ ಮರಳಿ ತರುವಲ್ಲಿ ಯಶಸ್ವಿಯಾಗಿತ್ತು..