ಕೈ ಹಿಡಿದು ನಡೆಸೆನ್ನನುಮಿನಿ ಕಥೆ
ಕೈ ಹಿಡಿದು ನಡೆಸೆನ್ನನುಮಿನಿ ಕಥೆ
ಅದೊಂದು ಸುಂದರ ವಿಶಾಲವಾದ ಸರೋವರ. . ಜನಸಂಚಾರ ತುಂಬಾ ವಿರಳವಾಗಿರುವ ಸುಂದರವಾದ ಸರೋವರ. ಹೆಚ್ಚು ಜನರಿಲ್ಲದಿರುವ ಕಾರಣ ಸರೋವರದ ನೀರು ಹಾಗೂ ಪರಿಸರವೆಲ್ಲವೂ ಸ್ವಚ್ಛ ಸುಂದರ.ಫಳಫಳನೆ ಹೊಳೆಯುವ ಸರೋವರದ
ಒಂದು ಕಡೆ ಬೆಳ್ದಾವರೆ,ನಡು ನಡುವೆ ನಿಧಾನವಾಗಿ ಮೆಲ್ಲಗೆ ವಿಹರಿಸುತ್ತಿರುವ ಹಂಸಗಳು. ಅಚ್ಛೋದ್ಯ ಸರೋವರವೋ ಎಂಬಂತೆ ಭ್ರಮೆ ಉಂಟು ಮಾಡುತ್ತಿರುವ ಆ ಸರೋವರದಲ್ಲಿ ಒಬ್ಬ ಕಿಶೋರಿ ಪ್ರತಿ ದಿನವೂ ಒಂದು ತಾವರೆ ಹೂವನ್ನು ಕೊಯ್ದು ಕೊಂಡೊಯ್ದು ಹತ್ತಿರ ದಲ್ಲೇ ಇದ್ದ ಲಕ್ಷ್ಮೀ ದೇವಾಲಯಕ್ಕೆ ಅರ್ಪಿಸುತ್ತಿದ್ದಳು..
ಒಂದು ದಿನ ತಾವರೆ ಹೂವನ್ನು ಕೀಳಲು ಹೋದ ಆ ಸುಂದರಿ, ಕಾಲು ಜಾರಿ ಸರೋವರದ ಸುಳಿಯ ಮಧ್ಯೆ
ಸಿಲುಕಿಕೊಂಡು ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಾ ಸುತ್ತಲೂ ಕಣ್ಣಾಡಿಸುತ್ತಿದ್ದಳು.
ಸರೋವರದ ಆಸುಪಾಸಿನಲ್ಲಿ ಯಾರೊಬ್ಬರೂ ಕಾಣಲಿಲ್ಲ.
ಸಾಯಂ ಸಂಧ್ಯಾ ಸಮಯದ ಮಬ್ಬು ಗತ್ತಲು ಆವರಿಸುತ್ತಿತ್ತು. ಅವಳ ಕಂಠದವರೆಗೆ ನೀರು ಉಕ್ಕುತ್ತಾ, ಇನ್ನೇನು ತನ್ನ ಜೀವ ಹೋಗುವ ಸಂದರ್ಭ ಬಂತೆಂದು ತಿಳಿದ ಆ ಕಿಶೋರಿ, "ಓ ಮಹಾತಾಯಿ, ಇಂದಿಗೆ ನಿನಗೆ ಮಾಡುವ ನನ್ನ ಸೇವೆ ಮುಗಿಯುತ್ತಾ ಬಂದಿದೆ ಎನಿಸುತ್ತದೆ. ನನ್ನ ಕೈ ಹಿಡಿದು ನಡೆಸುವವರು ಯಾರೂ ಇಲ್ಲಿ ಕಾಣುತ್ತಿಲ್ಲ. ಇದೋ ನಿನಗೆ ನನ್ನ ಕೊನೆ ನಮಸ್ಕಾರ" ಎಂದು ಹೇಳುತ್ತಾ, ತನ್ನ ಎರಡು ಕೈಗಳನ್ನು ಎತ್ತಿ ಮುಗಿಯುತ್ತಿದ್ದ ಆ ಹುಡುಗಿಯ ಬೆರಳನ್ನು ಯಾರೋ ಹಿಡಿದಂತಾಯಿತು. ನೀರಿನಲ್ಲಿ ಮುಳುಗುತ್ತಿರುವ ಅವಳಿಗೆ ಹುಲ್ಲು ಕಡ್ಡಿ ಸಿಕ್ಕಿದಂತೆ ಆ ಕಾಣದ ಕೈಗಳು ಅವಳ ಬೆರಳುಗಳನ್ನು ಹಿಡಿದು, ಮೆಲ್ಲಗೆ ನೀರಿನಿಂದ ಹೊರಗೆಳೆಯಿತು. ಆ ವೇಳೆಗಾಗಲೇ ಕತ್ತಲು ಆವರಿಸಿದ್ದರಿಂದ, ಆ ವ್ಯಕ್ತಿ ಯಾರೆಂದು ಆ ಕಿಶೋರಿ ಗೆ
ತಿಳಿಯಲೇ ಇಲ್ಲ. ಅವಳ ಬೆರಳುಗಳನ್ನು ಹಿಡಿದು ಆ ದೇವಾಲಯದ ವರೆಗೂ ತಂದು ಬಿಟ್ಟು ಹೋದ ವ್ಯಕ್ತಿ
ಇದ್ದಕ್ಕಿದ್ದಂತೆ ಅದೃಶ್ಯವಾದಾಗ, ಅವಳಿಗೆ ಎಲ್ಲಿಲ್ಲದ ಆಶ್ಚರ್ಯ ವಾಯಿತು.ಇದೇನು ದೈವಲೀಲೆಯೋ ?