ಧರ್ಮರಾಯನ ಸ್ವಗತ
ಧರ್ಮರಾಯನ ಸ್ವಗತ
ಆ ಕ್ಷಣ ಬಂದೇ ಬಿಟ್ಟಿತು . ನಾವು ಪಂಚ ಪಾಂಡವರು ದ್ರೌಪದಿಯ ಸಮೇತ ನಾರುಮಡಿಯುಟ್ಟು ಹಿಮವತ್ಪರ್ವತಕ್ಕೆ ಹೊರಡುವ ಸಮಯ . ಕೃಷ್ಣನು ನಮ್ಮನ್ನು ಅಗಲಿದಾಗಲೇ ನಾವು ಇದನ್ನು ಮಾಡಬೇಕಾಗಿತ್ತು .ಅಂತೂ ನಿರ್ಧಾರ ಮಾಡಿ ಹೊರಟಾಯಿತು . ಕಠಿಣ ಹಾದಿ . ಪರ್ವತವನ್ನು ಕ್ರಮಿಸುವ ಆಯಾಸ ಬೇರೆ . ಬದರಿನಾಥ ಪರ್ವತ ಸಾಲು ದಾಟುವಾಗಲೇ ಕುಸಿದುಹೋಗುವಷ್ಟು ಆಯಾಸ . ನನಗೆ ಅದೇನೂ ನಿರ್ಮೋಹದ ವ್ಯಸನ ತಗುಲಿತ್ತು . ಮೊದಲಿಗೆ ದ್ರೌಪದಿಯು ಕುಸಿದಳು , ಹೆಣ್ಣಾಗಿ ಹುಟ್ಟಿ ಎಷ್ಟೆಲ್ಲಾ ಕಷ್ಟ ಅವಮಾನ ಮೆಟ್ಟಿ ನಿಂತಿದ್ದ ಆಕೆ ಪರ್ವತದ ಕಿಬ್ಬಿಯೊಳಗೆ ಕುಸಿದು ಹೋದಳು , ನೋವುಂಡ ಶರೀರ ಈ ಪರ್ವತದ ಏರು ತ್ರಾಸದ ಪ್ರಯಾಣ ತಾಳಲಿಲ್ಲವೋ ಅಥವಾ ಕರ್ಮದ ಗಂಟು ಕಳೆಯುತ್ತಾ ದೇಹ ಕಳಚುವ ಇಳಿಜಾರಿನ ಹಾದಿಯಲ್ಲಿ ಬಿದ್ದು ಮಣ್ಣಾದಳೋ ಈ ವ್ಯಾಖ್ಯಾನ ಕರ್ಮದ ಫಲಾನುಫಲದ ಜಿಜ್ಞಾಸೆಗೆ ಬಿಟ್ಟದ್ದು . ಈ ಭಾರಕ್ಕೆ ಕುಸಿದು ಬೀಳುವ ಸರದಿ ಈಗ ನನ್ನ ತಮ್ಮಂದಿರದು . ಎಲ್ಲವನ್ನೂ ತಿಳಿದಿದ್ದ ಸಹದೇವ , ಶೂರ ನಕುಲ , ಉಗ್ರ ಪ್ರತಾಪಿ ಅರ್ಜುನ , ಕೊನೆಗೆ ಬಲ ಭೀಮನೂ ಬೆಟ್ಟದ ಏರಿಯನ್ನು ಕ್ರಮಿಸಲಾಗದೆ ಕುಸಿದುಹೋದರು . ಆದರೆ ಆಶ್ಚರ್ಯವೆಂದರೆ ಊರಿನಿಂದ ಹಿಂಬಾಲಿಸಿಕೊಂಡು ಬಂದ ಒಂದು ನಾಯಿಯ ಬಿಟ್ಟು . ಅದಾವುದೋ ಮಾಯೆ ನನ್ನನ್ನು ನಡೆಸಿಕೊಂಡು ಹೋಗುತ್ತಲೇ ಇದೆ ತಮ್ಮಂದಿರ ಅಗಲಿಕೆಯ ಮಡದಿಯ ಮರಣಕ್ಕೂ ಶೋಕಿಸದಷ್ಟು . ಅಥವಾ ಕವಿದ ಮಾಯೆ ಸರಿದ ಪ್ರಭಾವವೋ ಆ ಕೃಷ್ಣನೇ ಬಲ್ಲ . ಅದೋ ಅಲ್ಲಿ ಇಂದ್ರ ರಥ ಸಮೇತನಾಗಿ ಸ್ವರ್ಗಕ್ಕೆ ಕರೆಯುತ್ತಿದ್ದಾನೆ , ಆದರೆ ಈ ನಾಯಿಯ ಹೊರತು ನನಗೆ ಹೋಗಲು ಮನಸಿಲ್ಲ . ಈ ಏಕಾಂಗಿ ಪಯಣದಲ್ಲಿ ಮನೆಯವರೆಲ್ಲಾ ಮರೆಯಾದರೂ ನನ್ನ ಜೊತೆಗಿದ್ದದು ಇದೊಂದೇ , ಇದು ಮಮಕಾರದ ಪ್ರಶ್ನೆಯಲ್ಲ . ಸಹ ಪ್ರಯಾಣಿಕನಿಗೆ ಕೊಡುವ ಸೌಜನ್ಯ , ಗೌರವ , ಒಂದು ತೆರನಾದ ನ್ಯಾಯವೇ , ನಂತರ ನಡೆದದ್ದೇ ಬೇರೆ , ನಾಯಿಯ ಜಾಗದಲ್ಲಿ ಯಮಧರ್ಮ ನಿಂತಿದ್ದಾನೆ , ಇಂದ್ರ ನಗುತ್ತಿದ್ದಾನೆ , ಇದು ನನ್ನ ಧರ್ಮನಿಷ್ಠತೆಯ ಪರೀಕ್ಷೆಯಂತೆ !. ದೊಡ್ಡವರು ಪರೀಕ್ಷೆ ಮಾಡುತ್ತಾರೆ ...
ಆದರೆ ನನಗೆ ಅರ್ಥವಾದ ಧರ್ಮದ ಹರಹೆ ಬೇರೆ ,, ನಾನು ನನ್ನವರೆಂಬ ಮಮಕಾರವಿಲ್ಲದೆಯೇ ಎಲ್ಲರೂ ಸುಖವಾಗಿರಲಿ ಎಂಬ ಆರ್ಧ್ರತೆಯೇ ಧರ್ಮದ ಉಗಮ . ಯುದ್ಧವಾಗದೆ ಎಲ್ಲರೂ ಚೆನ್ನಾಗಿರಲಿ ಎಂದು ನಾನು ಆಸೆ ಪಟ್ಟಿದ್ದು ಅದಕ್ಕೆ . ಅದರಲ್ಲಿ ಮಮಕಾರವಿದ್ದಿತ್ತು . ಆದರೆ ಇಂದು ಜೊತೆ ಬಂದ ನಾಯಿಯ ವಿಚಾರ ಹಾಗಲ್ಲ . ಇದು ಮಮಕಾರವನ್ನು ಮೀರಿದ್ದು . ಅದಕ್ಕೆ ಇರಬೇಕು ಅವರು ನನ್ನನ್ನು ಧರ್ಮ ಪರೀಕ್ಷೆಯಲ್ಲಿ ತೇರ್ಗಡೆಗೊಳಿಸಿದ್ದು ..
ದಯೆಯೇ ಧರ್ಮದ ಮೂಲ .. ಧರ್ಮದ ಪಾಲನೆಯೇ ಮಾನವನ ನಿಜಬಲ
ತಮ್ಮಂದಿರನ್ನು ನೋಡುವ ಬಯಕೆಯಾಗುತ್ತಿದೆ . ಸಶರೀರವಾಗಿ ಸ್ವರ್ಗಕ್ಕೆ ಏರುವ ಅವಕಾಶ .. ಶರೀರ ಇರುವಷ್ಟು ಬಂಧನ ಸಹಜ ,,ಇದೆಲ್ಲವನ್ನು ಮೀರುವ ಕೃಷ್ಣ ಸಾಯುಜ್ಯ ಸೇರುವ ಪರಿ ಎಂತು ..ಅದು ಮತ್ತೊಂದು ಭಾರತದ ಕಥೆಯೇ ..