ಬೀಜ ವೃಕ್ಷ ನ್ಯಾಯ
ಬೀಜ ವೃಕ್ಷ ನ್ಯಾಯ
ಬೇಸಿಗೆ ರಜೆಯಲ್ಲಿ ತಾತನ ಮನೆಗೆ ಬಂದ ಮೊಮ್ಮಕ್ಕಳು, ಆ ಮನೆಯ ವಿಶಾಲವಾದ ಹಿತ್ತಲನ್ನು ಕಂಡು ಕುಣಿದಾಡಿದರು. ಕಾಂಕ್ರೀಟ್ ನಗರದಲ್ಲಿ ಕೇವಲ ಪಾಟ್ ಗಳಲ್ಲಿ ಬೆಳೆಸುವ ಪುಟ್ಟ ಪುಟ್ಟ ಸಸಿಗಳನ್ನು ಕಂಡಿದ್ದ ಮಕ್ಕಳು , ತಾತನ ಮನೆಯಲ್ಲಿ ದೊಡ್ಡ ದೊಡ್ಡ ಹಣ್ಣಿನ ಮರಗಳು, ಹೂವಿನ ಗಿಡಗಳನ್ನು ನೋಡಿ ಆಶ್ಚರ್ಯ ಪಡುತ್ತಿದ್ದರು.
ಕೃಷಿಕರಾಗಿದ್ದ ಆ ಮಕ್ಕಳ ತಾತ, ಒಂದೊಂದು ಗಿಡ ದ ಬಗ್ಗೆಯೂ ವಿವರಿಸಿ ತಿಳಿಸುತ್ತಿದ್ದರು. ಇದರಿಂದ ಮಕ್ಕಳಿಗೆ ಒಂದು ಗಿಡ ವಿಶಾಲವಾಗಿ ಎತ್ತರಕ್ಕೆ ಬೆಳೆಯ ಬೇಕಾದರೆ ಮಣ್ಣಿನ ಭೂಮಿ ಬೇಕೆಂಬ ವಿಷಯ ತಿಳಿಯಿತು. ಅದೇ ರೀತಿ ಬೀಜದಿಂದ ದೊಡ್ಡ ಮರವಾಗಿ, ಅದೇ ಮರ ಕೊಡುವ ಮತ್ತೊಂದು ಬೀಜ ಮಗದೊಂದು ಮರವಾಗುತ್ತದೆ. ಇದೊಂದು ಬೀಜ ವೃಕ್ಷ ನ್ಯಾಯ ಎಂದೂ ಸಹ ತಮ್ಮ ತಾತನ ಮಾತಿನಿಂದ ತಿಳಿದುಕೊಂಡರು. ಅಷ್ಟೇ ಅಲ್ಲದೆ ಮನೆಯ ಮುಂದೆ ಒಂದು ಗಿಡವನ್ನು ಬೆಳೆಸುವುದರಿಂದ ಆಗುವ ಉಪಯೋಗಗಳು ಬಗ್ಗೆಯೂ ತಿಳಿಯಿತು.
ರಜ ಮುಗಿದು,ಮೊಮ್ಮಕ್ಕಳು ತಮ್ಮ ಊರಿಗೆ ತೆರಳುವಾಗ, ತಾತ ಎಲ್ಲರಿಗೂ ಒಂದೊಂದು ಸಣ್ಣ ಸಸಿಯನ್ನು ಕೊಟ್ಟು ಇದನ್ನು ಚೆನ್ನಾಗಿ ನೋಡಿಕೊಂಡರೆ ಇದೇ ದೊಡ್ಡ ಮರವಾಗುತ್ತದೆ ಎಂದು ಹೇಳಿ ಕಳುಹಿಸಿದರು.
ತಾತನ ಊರಿನಿಂದ ವಾಪಸ್ ಬಂದ ಮಕ್ಕಳು, ತಾತ ಕೊಟ್ಟ ಸಸಿಯನ್ನು ತಮ್ಮ ಮನೆಯ ಮುಂದೆ ಇಟ್ಟು ಬೆಳೆಸಲು ಪ್ರಾರಂಭಿಸಿದರು.
ಹಲವು ವರ್ಷಗಳ ನಂತರ ಆ ಮೊಮ್ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸಕ್ಕೆ ಸೇರಿಕೊಂಡರು. ಅವರು ತಾತ ದೇವರ ಪಾದ ಸೇರಿದ್ದೂ ಆಯಿತು. ಆದರೆ ತಾತನಿಂದ ಪಡೆದುಕೊಂಡು ಬಂದಿದ್ದ ಆ ಸಸಿಗಳು ದೊಡ್ಡದಾಗಿ ಬೆಳೆದು ಹೆಮ್ಮರವಾಗಿ ನಿಂತು, ಜನೋಪಯೋಗಿಯಾಯಿತು.
ಆ ತಾತನ ಮೊಮ್ಮಕ್ಕಳು ಈಗ ಬೀದಿಯಲ್ಲಿ ಸಾಲು ಮರಗಳನ್ನು ನೆಡುವ ಮಹತ್ಕಾರ್ಯವನ್ನು ಹಮ್ಮಿಕೊಂಡಿದ್ದಾರೆ.